ಬೆಂಗಳೂರು:- ಕ್ಷುಲ್ಲಕ ವಿಚಾರಕ್ಕೆ ಕಿರಿಕ್ ನಡೆದು ಕೈದಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ
ಗಾಯಗೊಂಡವರನ್ನು ಆನಂದ್ ಹಾಗೂ ಹುಸೇನ್ ಎಂದು ಗುರುತಿಸಲಾಗಿದೆ. 24 ವರ್ಷದ ಸೂರ್ಯಪ್ರಕಾಶ್ ಹಲ್ಲೆ ಮಾಡಿರುವ ವಿಚಾರಣಾದೀನ ಕೈದಿ ಆಗಿದ್ದಾನೆ. ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಾಹ್ನ ಊಟದ ವೇಳೆ ಸೂರ್ಯ ಪ್ರಕಾಶ್ ಹಾಗೂ ಆನಂದ ನಡುವೆ ಸಣ್ಣ ಕಾರಣಕ್ಕೆ ಜಗಳ ಶುರುವಾಗಿದೆ. ಆ ಸಮಯದಲ್ಲಿ ಸೂರ್ಯಪ್ರಕಾಶ್ ಸಮೀಪದ ಬಾತ್ರೂಮ್ನಲ್ಲಿ ಅಳವಡಿಸಿದ್ದ ಟೈಲ್ಸ್ ತೆಗೆದುಕೊಂಡು ಆನಂದ್ ಮೇಲೆ ಹಲ್ಲೆ ಮಾಡಿದ್ದಾನೆ. ಇದೇ ಸಮಯದಲ್ಲಿ ಹೊಡೆದಾಟ ಬಿಡಿಸಲು ಬಂದಿದ್ದ ಮತ್ತೊಬ್ಬ ಕೈದಿ ಹುಸೇನ್ ಎಂಬಾತನ ಮೇಲೆ ಕೂಡ ಟೈಲ್ಸ್ನಿಂದ ಹಲ್ಲೆ ಮಾಡಿದ್ದು, ಸದ್ಯ ಆನಂದ್ಗೆ ಗಂಭೀರ ಗಾಯಗಳಾಗಿವೆ.
ಹುಸೇನ್ನನ್ನು ಜೈಲಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಆನಂದ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಘಟನೆ ಸಂಬಂಧ ಜೈಲಿನ ಉಪ ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ನೀಡಿರುವ ದೂರಿನ ಅನ್ವಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



