ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಅಖಿಲ ಭಾರತ ಆಕಾಶವಾಣಿಯ ಎ ಗ್ರೇಡ್ ನಾಟಕ ಕಲಾವಿದರಾದ ಡಾ. ಶಶಿಧರ ನರೇಂದ್ರ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಅಂತರ ವಲಯ ಯುವಜನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಸಹನೆ, ತಾಳ್ಮೆಯನ್ನು ಮನೆಯಲ್ಲಿ ಹೇಳಿಕೊಡಬೇಕು. ಸಂಸ್ಕಾರ ಕಲಿಸದೇ ಹೋದರೆ ದುರ್ಘಟನೆಗಳು ಸಂಭವಿಸುತ್ತವೆ. ಸಪ್ತ ಸ್ವರಗಳನ್ನು ಶುದ್ಧವಾಗಿ ಹಾಡಬೇಕಾದರೆ ಕಠಿಣ ಪರಿಶ್ರಮ ಮುಖ್ಯವಾಗುತ್ತದೆ. ಭಾರತವು ಕಲೆಯನ್ನು ಪೋಷಿಸುವ ರಾಷ್ಟçವಾಗಿದೆ. ಮುಕ್ತಿ ಕೊಡುವ ಕಲೆ ನಮ್ಮದಾಗಿದೆ. ವಿಶ್ವಕ್ಕೆ ಸಂಸ್ಕೃತಿಯ ಪಾಠ ಹೇಳಿಕೊಟ್ಟ ದೇಶ ನಮ್ಮದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಿ.ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಸಮಾಜ ಒಡೆದು ಹೋಗುತ್ತಿದೆ. ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭಾರತೀಯ ಸಂಸ್ಕೃತಿಯನ್ನು ಬೇರೆ ಬೇರೆ ರಾಷ್ಟ್ರಗಳು ಪಾಲಿಸುತ್ತಿವೆ. ಭರತನಾಟ್ಯ, ಸುಗಮ ಸಂಗೀತ, ನಾಟಕಗಳನ್ನು ಬೇರೆ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಭಾರತದ ಕಲೆ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಬುದ್ಧನ ತತ್ವಗಳು ಇಂದಿಗೂ ಸಹ ಅನ್ವಯವಾಗುತ್ತವೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಕ್ಷೇತ್ರಗಳಲ್ಲಿ ಸಾಧನೆಗೈಯಲು ಪ್ರೀತಿ, ವಾತ್ಸಲ್ಯ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆಡಳಿತಾಂಗ ಕುಲಸಚಿವರಾದ ಗೀತಾ ಈ.ಕೌಲಗಿ, ಹಣಕಾಸು ಅಧಿಕಾರಿಗಳಾದ ಸಂಜೀವಕುಮಾರ ಸಿಂಗ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ. ಗಿರೀಶ್ ಕೆ.ಸಿ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚನ್ನಮ್ಮ ಮಠದ ನಿರೂಪಿಸಿದರು. ಪ್ರಮತಿ ಪ್ರಾರ್ಥಿಸಿದರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ರೀಮಾ ಎಂ ಸ್ವಾಗತಿಸಿದರು. ಭೂಮಿಕಾ ತಂಡಗಳನ್ನು ಪರಿಚಯಿಸಿದರು. ಹರ್ಷಿತಾ ವಂದಿಸಿದರು.