8 ದಿನಗಳ ಬಳಿಕ ಐಪಿಎಲ್ ಮಹಾ ಸಂಗ್ರಾಮದ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಮರು ಆರಂಭದ ಮೊದಲ ಪಂದ್ಯದಲ್ಲಿ ಮತ್ತದೇ ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲ್ ಎಸೆಯುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಬ್ಯಾಟಲ್ನಲ್ಲಿ ಆರ್ಸಿಬಿ ಎದುರಿನ ಸೇಡಿಗೆ ಕೊಲ್ಕತ್ತಾ ಸನ್ನದ್ಧವಾಗಿದ್ರೆ, ಇತ್ತ ಗೆಲುವಿನ ನಾಗಲೋಟದ ಕನಸು ಕಾಣ್ತಿರುವ ಆರ್ಸಿಬಿ, ಇವತ್ತೇ ಪ್ಲೇ ಆಫ್ ನೀಡಲು ಹಾತೊರೆಯುತ್ತಿದೆ.
ಇದರ ನಡುವೆ ತಂಡದ ನಾಯಕ ರಜತ್ ಪಾಟಿದಾರ್ ಆರ್ಸಿಬಿ ಕುರಿತು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು, ಕಳೆದ 3 ವರ್ಷಗಳ ಹಿಂದೆ ನಡೆದಿದ್ದ ಘಟನೆಯ ಕುರಿತು ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದಾರೆ. “2022ರ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಕಡೆಯಿಂದ ನನಗೆ ಒಂದು ಸಂದೇಶ ಬಂದಿತ್ತು.
ನೀವು ಸಿದ್ಧರಾಗಿರಿ ನಾವು ನಿಮ್ಮನ್ನು ಆಯ್ಕೆ ಮಾಡುತ್ತೇವೆ ಎಂದು. ಈ ವೇಳೆ ನನ್ನ ಮನಸಿನ್ನಲ್ಲಿ ಗಾಢವಾದ ನಂಬಿಕೆ ಮೂಡಿದ್ದು ಈ ಸಲ ಆರ್ಸಿಬಿ ತಂಡದ ಪರ ಕಣಕ್ಕಳಿಯುವೆ ಎಂದೇ ನಂಬಿದ್ದೆ. ಆದರೆ ಅದೆಲ್ಲ ಹುಸಿ ಆಯ್ತು. ತಂಡಕ್ಕೆ ಆಯ್ಕೆ ಮಾಡಲಿಲ್ಲ. ಇದು ನನಗೆ ಕೋಪ ತರಿಸಿದ್ದರ ಜೊತೆಗೆ ಭಾರೀ ನಿರಾಸೆ ಮೂಡಿಸಿತು.
ಇದರೊಂದಿಗೆ, ನಾನು ದೇಶೀಯ ಕ್ರಿಕೆಟ್ನ ಹಾದಿಯನ್ನು ಹಿಡಿದೆ. ಇಂದೋರ್ನಲ್ಲಿ ಪಂದ್ಯಗಳನ್ನು ಆಡುತ್ತಿರುವಾಗ, ಗಾಯಗೊಂಡ ಸಿಸೋಡಿಯಾ ಬದಲಿಗೆ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆರ್ಸಿಬಿ ಕಡೆಯಿಂದ ಮತ್ತೆ ಕರೆ ಬಂದಿತು. ಆದರೆ ನಾನು ಆರ್ಸಿಬಿಗೆ ತಿರುಗಿ ಹೋಗಬಾರದು ಎಂದುಕೊಂಡಿದ್ದೆ. ಗಾಯದಿಂದ ಆಟಗಾರ ಚೇತರಿಸಿಕೊಂಡರೇ ನಾನು ಡಗೌಟ್ಗೆ ಸೀಮಿತಗೊಳ್ಳಬೇಕಾಗುತ್ತದೆ ಎಂದು ಭಾವಿಸಿದ್ದೆ ಎಂದು ಪಾಟಿದಾರ್ ಹೇಳಿದರು.