ವಿಜಯಸಾಕ್ಷಿ ಸುದ್ದಿ, ಮುಳಗುಂದ: ದೇವಿ ಜಾತ್ರೆಗಳಿಂದ ಸಮೃದ್ಧ ಬದುಕು ಕಟ್ಟಿಕೊಳ್ಳಲು ಸಹಕಾರಿ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಪಟ್ಟಣದಲ್ಲಿ ಜರಗುತ್ತಿರುವ ಗ್ರಾಮ ದೇವತಾ ಟೋಪ ಜಾತ್ರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಭಾರತಿಯ ಪರಂಪರೆಯಲ್ಲಿ ಜಾತ್ರೆಗಳಿಗೆ ವಿಶೇಷವಾದ ಸ್ಥಾನವಿದೆ. ದೇವಿ ಜಾತ್ರೆಗಳು ಜರುಗುವುದರಿಂದ ಸುಖ, ಶಾಂತಿ, ನೆಮ್ಮದಿ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮ ದೇವತಾ ಟೋಪ ಜಾತ್ರೆ ಪ್ರತಿ 12 ವರ್ಷಕ್ಕೊಮ್ಮೆ ಜರಗುವುದು ವಿಶೇಷವಾಗಿದೆ ಎಂದರು.
ಜಾತ್ರಾ ಮಹೋತ್ಸವದ ಗೌರವಾಧ್ಯಕ್ಷ ಶಿವಣ್ಣಾ ನೀಲಗುಂದ ಮಾತನಾಡಿ, ಪಟ್ಟಣದ ಆರಾಧ್ಯ ದೇವಿ ದ್ಯಾಮವ್ವ ಹಾಗೂ ದುರ್ಗಮ್ಮಾ ಜಾತ್ರೆ ಪ್ರತಿ 12 ವರ್ಷಕ್ಕೊಮ್ಮೆ ಜರುಗುತ್ತಿದ್ದು, ಶಾಂತಿ, ಸೌಹಾರ್ದತೆಯಿಂದ ಜಾತಿ, ಮತ, ಭೇದವಿಲ್ಲದೆ ನಡೆದುಕೊಂಡು ಬರುತ್ತಿದೆ ಎಂದರು.
ಉತ್ತರ ಕರ್ನಾಟಕದ ಜಾನಪದ ಕಲಾವಿದ ಬಾಳು ಬೆಳಗುಂದಿ-ಕಲಾ ತಂಡದಿಂದ ರಸಮಂಜರಿ ಹಾಗೂ ರಾಯಚೂರ ಪ್ರಖ್ಯಾತ ವಚನ ಗಾಯಕ ಪಂ.ಅಂಬಯ್ಯ ನೂಲಿ ಇವರಿಂದ ವಚನ ಸಂಗೀತ ಜರುಗಿತು.
ದಿವ್ಯ ಸಾನ್ನಿಧ್ಯವನ್ನು ಗವಿಮಠದ ಮಲ್ಲಿಕಾರ್ಜುನ ಮಾಹಾಸ್ವಾಮೀಜಿ, ಸಮ್ಮುಖವನ್ನು ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ವಹಿಸಿದ್ದರು. ಉದ್ಘಾಟನೆಯನ್ನು ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪಂ.ಡಾ. ರಾಜಗುರು ಗುರುಸ್ವಾಮಿ ನೆರವೇರಿಸಿದರು. ಶಿವಣ್ಣಾ ನೀಲಗುಂದ, ಪ.ಪಂ ಅಧ್ಯಕ್ಷೆ ಯಲ್ಲವ್ವ ಕವಲೂರ, ಪ.ಪಂ ಸದಸ್ಯ ಷಣ್ಮುಖಪ್ಪ ಬಡ್ನಿ, ಬಿ.ವಿ. ಸುಂಕಾಪೂರ, ಡಾ. ಎಸ್.ಸಿ. ಚವಡಿ, ವಿಜಯ ನೀಲಗುಂದ, ಬಸವಂತಪ್ಪ ಮಟ್ಟಿ, ಮಾಹಾಂತಪ್ಪ ನೀಲಗುಂದ, ಬಸವರಾಜ ಬಾತಾಖಾನಿ, ಮಂಜುನಾಥ ಮಟ್ಟಿ, ವರ್ಷಾ ಬಾರಕೇರ ಇದ್ದರು.