ವಿಜಯಸಾಕ್ಷಿ ಸುದ್ದಿ, ಡಂಬಳ: ಜನರು ಪ್ಲಾಸ್ಟಿಕ್ ಬಳಕೆ ಕಡೆಗಣಿಸಿ, ಪರಿಸರ ಹಾಳು ಮಾಡುವುದನ್ನು ನಿಲ್ಲಿಸಿ, ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಿ, ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ, ಮರಗಳನ್ನು ಉಳಿಸಿ ನಿಸರ್ಗ ದೇವತೆಯ ಒಡಲು ಹಸಿರಾಗುವಂತೆ ಪ್ರತಿಯೊಬ್ಬರೂ ನೋಡಿಕೊಳ್ಳಬೇಕಾಗಿದೆ ಎಂದು ಪ್ರಾಂಶುಪಾಲ ಪ್ರಕಾಶ ವಾಸುದೇವ ಇಮ್ಮಡಿ ಹೇಳಿದರು.
ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಪರಿಸರ ದಿನಾಚರಣೆಯ ನಿಮಿತ್ತ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, 1973ರಲ್ಲಿ ವಿಶ್ವಸಂಸ್ಥೆಯು ಮೊದಲ ಬಾರಿಗೆ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಹಿತದೃಷ್ಟಿಯಿಂದ ವಿಶ್ವದಾದ್ಯಂತ ವಿಶ್ವ ಪರಿಸರ ದಿನ ಆಚರಿಸಲಾಯಿತು. ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಪರಿಸರ ಹಾಳು ಮಾಡದಂತೆ ತಡೆಯುವುದು ವಿಶ್ವ ಪರಿಸರ ದಿನದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಬೆಲೆಬಾಳುವ ಶ್ರೀಗಂಧದ ಮರ, ರಕ್ತಚಂದನ, ಮಹಾಗನಿ, ರೋಸ್ ವುಡ್ ಮುಂತಾದ ಮರ ಬೆಳೆಸುವ ಮೂಲಕ ನಮ್ಮ ಆರ್ಥಿಕ ಅಭಿವೃದ್ಧಿಯ ಜೊತೆಗೆ ಆರೋಗ್ಯಕರ ಬದುಕು, ಆದರ್ಶದ ಬದುಕು ಮತ್ತು ಆಧ್ಯಾತ್ಮಿಕ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಹೇಳಿದರು.
ಗುರುವೃಂದದ ಸುನಿತಾ ಎಚ್.ಎಮ್, ಸುರೇಖಾ ವಿ.ನಾವಿ, ಸುನಾಲಿ ಸಿ.ಕುಲಕರ್ಣಿ, ಬಸಮ್ಮ ವಿ. ನರೇಗಲ್ಲ, ರೇಷ್ಮಾ ದೊಂಗಡಿ, ಸುರೇಖಾ ಹೊಸಟ್ಟಿ, ಎಸ್.ಡಿ. ಲಮಾಣಿ, ರತ್ಮಮ್ಮ ಜಿ.ಬಿ, ಅಶೋಕ ಪವಾಡಿ ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.