ವಿಜಯಸಾಕ್ಷಿ ಸುದ್ದಿ, ಮಂಡ್ಯ
ಕೊರೊನ ಸೋಂಕಿತರಿಗಾಗಿ ಶಾಸಕ ಡಾ. ಕೆ. ಅನ್ನದಾನಿ ಅವರು ಸಂಗೀತ ಸುಧೆ ಹರಿಸಿ, ಅವರಲ್ಲಿ ಚೈತನ್ಯ ತುಂಬುವ ಕಾರ್ಯ ಮಾಡಿದ್ದಾರೆ. ತಾಲೂಕಿನ ಬಾಚನಹಳ್ಳಿ ವಸತಿ ಶಾಲೆಯ ಕೋವಿಡ್ -19 ಕ್ವಾರೆಂಟೈನ್ ಚಿಕಿತ್ಸಾ ಕೇಂದ್ರದಲ್ಲಿರುವ ಸೋಂಕಿತರನ್ನು ರಂಜಿಸಿ, ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಶಾಸಕರು ಈ ಕಾರ್ಯ ಮಾಡಿದ್ದಾರೆ. ಯರಳ್ಳಿ ಪುಟ್ಟಸ್ವಾಮಿ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಶಾಸಕ ಡಾ. ಕೆ. ಅನ್ನದಾನಿ ಅವರು ತಾವೇ ಸ್ವತಃ ಹಾಡು ಹೇಳಿ, ರೋಗಿಗಳು ಆತ್ಮವಿಶ್ವಾಸದಿಂದ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸೋಂಕಿತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನ ಸಾಂಕ್ರಾಮಿಕ ಕಾಯಿಲೆ. ಸೋಂಕಿನಿಂದಾಗಿ ಚಿಕಿತ್ಸೆ ಗಾಗಿ ಕ್ವಾರೆಂಟೈನ್ ಗೆ ಒಳಗಾಗಿರುವ ಸೋಂಕಿತರು ಮಾನಸಿಕ ಖಿನ್ನತೆಗೆ, ಆತಂಕಕ್ಕೆ ಒಳಗಾಗಬಾರದು. ಆತ್ಮಸ್ಟೈರ್ಯದಿಂದ ಇಲ್ಲಿ ಇರುವವರೆಗೂ ಉಲ್ಲಾಸ ದಿಂದ, ಖುಷಿಯಾಗಿರಬೇಕು ಎಂದು ಧೈರ್ಯ ತುಂಬಿದ್ದಾರೆ.
ಸಂಗೀತಕ್ಕೆ ಮಾರು ಹೋದವರು ಈ ಜಗತ್ತಿನಲ್ಲಿ ಯಾರೂ ಇಲ್ಲ. ಅಂತಹ ಆತ್ಮಸ್ಟೈರ್ಯ ತುಂಬುವ ಶಕ್ತಿ ಸಂಗೀತಕ್ಕೆ ಮಾತ್ರ ಇದೆ. ಹೀಗಾಗಿಯೇ ಈ ವಿನೂತನ ಮನರಂಜನಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾನು ಕೂಡ ನಿಮ್ಮ ಜೊತೆ ಯಾವಾಗಲು ಇರುತ್ತೇನೆ. ಸೋಂಕಿತರು ದೃತಿಗೆಡದೆ ಸಂತೋಷದಿಂದ ಇದ್ದು, ಕೊರೋನಾ ಗೆದ್ದು ಹೊರಬನ್ನಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿದೇರ್ಶಕ ರಾಜೇಶ್, ಜಯರಾಜು ಒಕ್ಕರಹಳ್ಳಿ, ಕುಮಾರ್ ಸೇರಿದಂತೆ ಹಲವರು ಇದ್ದರು.