ವಿಜಯಸಾಕ್ಷಿ ಸುದ್ದಿ, ರೋಣ: ಭವ್ಯ ಭಾರತಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನಾಯಕತ್ವ ಅಗತ್ಯವಾಗಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಜಿ.ಎಸ್. ಪಾಟೀಲ ಹೇಳಿದರು.
ಅವರು ಗುರುವಾರ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಜನ್ಮ ದಿನಾಚರಣೆ ನಿಮಿತ್ತ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಸಣಾ ಶಿಬಿರ, ಶಸ್ತ್ರ ಚಿಕಿತ್ಸೆ ಮತ್ತು ಸರಕಾರಿ ಶಾಲೆಯ 1500 ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿರು.
ದೇಶಕ್ಕಾಗಿ, ನಾಡಿನ ಹಿತಕ್ಕಾಗಿ, ದೇಶದಲ್ಲಿನ ಸರ್ವ ಜನಾಂಗದ ಏಕತೆಗಾಗಿ ಗಾಂಧಿ ಮನೆತನ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಇಂದು ಭಾರತ ದೇಶ ಎತ್ತರದಲ್ಲಿ ಬೆಳೆದು ನಿಲ್ಲಲು ಗಾಂಧಿ ಮನೆತನದ ಕೊಡುಗೆಯೂ ಕಾರಣವಾಗಿದೆ. ರಾಹುಲ್ ಗಾಂಧಿಯವರು ಸುಮಾರು 5 ಸಾವಿರ ಕಿ.ಮೀ ಪಾದಯಾತ್ರೆ ನಡೆಸುವ ಮೂಲಕ ದೇಶದ ಜನರ ಹೃದಯವನ್ನು ಗೆದ್ದಿದ್ದಾರೆ ಎಂದರು.
ರೋಣ ಮತಕ್ಷೇತ್ರದ ಯುವಕರು ರಾಹುಲ್ ಗಾಂಧಿಯವರ ನಾಯಕತ್ವಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಸಂವಿಧಾನದ ಉಳಿವಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ದೇಶದ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಬೇಕು. ಮುಖ್ಯವಾಗಿ ಅವರ ಜನ್ಮದಿನದಂದು ಸಮಾಜಮುಖಿ ಕಾರ್ಯಗಳನ್ನು ಯುವ ಕಾಂಗ್ರೆಸ್ ಹಮ್ಮಿಕೊಂಡಿರುವುದು ಶ್ಲಾಘನೀಯ. ಯುವವಕರು ಸದೃಢ ಸಮಾಜ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ರಾಜ್ಯ ಕಾರ್ಯದರ್ಶಿ ಅಕ್ಷಯ ಪಾಟೀಲ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಬಸ್ಸಮ್ಮ ಕೊಪ್ಪದ, ಉಪಾಧ್ಯಕ್ಷ ಹನ್ಮಂತ ತಳ್ಳಿಕೇರಿ, ವಿ.ಬಿ. ಸೋಮನಕಟ್ಟಿಮಠ, ಯೂಸುಫ್ ಇಟಗಿ, ಮುತ್ತುರಾಜ ನವಲಗುಂದ, ಸೋಮು ನಾಗರಾಜ, ಮೈಲಾರಪ್ಪ ಚಳ್ಳಮರದ, ಆನಂದ ಚಂಗಳಿ, ಶಿವು ಹುಲ್ಲೂರ, ಅಸ್ಲಂ ಕೊಪ್ಪಳ, ಅಭಿಷೇಕ ನವಲಗುಂದ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ರಾಹುಲ್ ಗಾಂಧಿಯವರ ದಿಟ್ಟ ನಾಯಕತ್ವಕ್ಕೆ ಬೆದರಿದ ಬಿಜೆಪಿಯವರು ಅವರ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡಿದರೂ ಸಹ ಅವರು ಭಯಪಡದೇ ಧೈರ್ಯದಿಂದ ಅವುಗಳನ್ನು ಎದುರಿಸಿ ದೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಮತ್ತಷ್ಟು ಮಂಚೂಣಿಗೆ ತಂದರು. ಇಂದು ದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಠವಾಗಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಸ್ಥಾಪನೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಶಾಸಕ ಜಿ.ಎಸ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.