ಹಾಸನ:- ಬೇಲೂರಿನ ಮತ್ತಿಹಳ್ಳಿ ಗ್ರಾಮದ ಬಳಿ ಚಲಿಸುತ್ತಿರುವಾಗಲೇ ಟ್ರಕ್ ಎರಡು ಚಕ್ರಗಳು ಕಳಚಿಕೊಂಡು ಉರುಳುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದ ಘಟನೆ ಜರುಗಿದೆ.
ಚಕ್ರಗಳು ಕಳಚಿಕೊಳ್ಳುತ್ತಿದ್ದಂತೆ ಸ್ವಲ್ಪ ದೂರದಲ್ಲೇ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಚಕ್ರಗಳು ಕಳಚಿಕೊಂಡು ಆಟೋಗೆ ಅಪ್ಪಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವಘಡದಲ್ಲಿ ಹರೀಶ್ ಎಂಬವರಿಗೆ ಸೇರಿದ ಆಟೋ ಸಂಪೂರ್ಣ ಜಖಂಗೊಂಡಿದೆ.
ಮಂಗಳೂರನಿಂದ ಬೆಂಗಳೂರು ಕಡೆಗೆ ಟ್ರಕ್ ತೆರಳುತ್ತಿತ್ತು. ಈ ವೇಳೆ, ರಸ್ತೆಯಲ್ಲಿಯೇ ಟ್ರಕ್ ಹಿಂಬದಿಯ ಎರಡೂ ಚಕ್ರಗಳು ಕಳಚಿಕೊಂಡು ವೇಗವಾಗಿ ರಸ್ತೆಯಲ್ಲಿ ಉರುಳುತ್ತಾ ಆಟೋಗೆ ಡಿಕ್ಕಿ ಹೊಡೆದಿವೆ.
ಒಂದು ಚಕ್ರ ಆಟೋಗೆ ಡಿಕ್ಕಿ ಹೊಡೆದು ಮುಂದಕ್ಕೆ ಹಾರಿ ರಸ್ತೆ ಬದಿಯ ಬೇಲಿಗೆ ನುಗ್ಗಿದೆ. ಅದೃಷ್ಟವಶಾತ್ ಈ ಸಂದರ್ಭದಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳು ಇರದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಬೇಲೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.