ಚಿಕ್ಕಮಗಳೂರು: ನಗರದ ಬೇಲೂರು ರಸ್ತೆಯ ರೈಲ್ವೆ ನಿಲ್ದಾಣದ ಬಳಿ ಎರಡು ಯುವಕರ ಗುಂಪುಗಳು ಬಡಿದಾಡಿ ಕೊಂಡಿರುವ ಘಟನೆ ನಡೆದಿದೆ. ಎಣ್ಣೆ ಮತ್ತು ಗಾಂಜಾ ನಶೆಯಲ್ಲಿದ್ದ ಎಂಟರಿಂದ ಹತ್ತು ಮಂದಿ ಯುವಕರು ಪರಸ್ಪರ ಹೊಡೆದಾಡಿದ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.
Advertisement
ಮೈಮೇಲಿನ ಬಟ್ಟೆ ಹರಿದರೂ ಅರಿವಿಲ್ಲದೇ, ಕೆಲವರು ದೊಣ್ಣೆಗಳನ್ನು ಹಿಡಿದು ಎದುರಾಳಿ ಗುಂಪಿನ ಮೇಲೆ ಹಲ್ಲೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನೆಲಕ್ಕುರುಳಿದರು ಮತ್ತೆ ಎದ್ದು ಹೊಡೆದಾಡಿದ ದೃಶ್ಯ ಎಲ್ಲರನ್ನು ಭಯಭೀತರನ್ನಾಗಿ ಮಾಡಿತು.
ಗಲಾಟೆ ಏಕೆ ಎಂಬುದು ತಿಳಿಯದೆ ಜನರು ಸಮೀಪದಲ್ಲೇ ನಿಂತು ನೋಡುತ್ತಿದ್ದರು. ಹೊಡೆದಾಟದ ವೇಳೆ ಕೆಲವರು ಗಾಯಗೊಂಡರೂ ಯಾರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಈ ಪ್ರದೇಶದಲ್ಲಿ ಪದೇಪದೇ ಜಗಳಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಪೊಲೀಸ್ ಬೀಟ್ ಹೆಚ್ಚಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.