ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶ ಮಾಡಿದೆ. ರೈತರು, ಜನರು, ಪ್ರತಿಪಕ್ಷಗಳು ಪ್ರತಿಭಟನೆ ಮಾಡಿದರೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಇಂದು ಹಾವೇರಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾದ ವಿರೂಪಾಕ್ಷಪ್ಪ ಬಳ್ಳಾರಿಯವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ತೋರಿಸಿರುವ ಉತ್ಸಾಹದಿಂದ ಹೊಸ ಹುಮ್ಮಸ್ಸು ಬಂದಿದೆ.
ನಾವೆಲ್ಲರೂ ಅಧಿಕಾರದಲ್ಲಿದ್ದಾಗಲೂ ಪಕ್ಷ ಸಂಘಟನೆ ಮಾಡಿದ್ದೇವೆ. ಅಧಿಕಾರ ಇಲ್ಲದಿರುವಾಗಲೂ ಹೋರಾಟ ಮಾಡಿದ್ದೇವೆ. ಈ ಭಾಗದ ಜೀವನದಿಗಳಿಗಾಗಿ ಹೋರಾಟ ಮಾಡಿದ್ದೇವೆ. ಅಧಿಕಾರಕ್ಕೆ ಬಂದಾಗ ಅವೆಲ್ಲ ಕಾರ್ಯ ಮಾಡಿದ್ದೇವೆ. ನಮ್ಮ ನಾಯಕ ಯಡಿಯೂರಪ್ಪ ಅವರು ಹೊರಾಟ ಮಾಡುವುದನ್ನು ಹೇಳಿದ್ದಾರೆ. ನಾವು ಬಡವರ ಪರ, ಜನಪರ ಸರ್ಕಾರವನ್ನು ಇಡೀ ದೇಶವೇ ಮೆಚ್ಚುವಂತೆ ಮಾಡಿದ್ದೇವೆ.
ನಮ್ಮ ಶಾಕಸರು ಮುಖಂಡರಿಗೆ ಕಿವಿಮಾತು ಹೇಳುತ್ತೇನೆ. ಮುಂದಿನ ಎರಡೂವರೆ ವರ್ಷದಲ್ಲಿ ಪಕ್ಷದ ಗೆಲುವಿಗೆ ಹೇಗೆ ಶ್ರಮಿಸಬೇಕು ಎಂದು ಚಿಂತನೆ ಮಾಡಬೇಕಿದೆ. ಪ್ರತಿದಿನ ಸತ್ಯಾಗ್ರಹ ಮಾಡುವಷ್ಟು ವಿಷಯ ಕಾಂಗ್ರೆಸ್ ವಿಷಯ ಕೊಡುತ್ತಿದೆ. ಐದು ವರ್ಷದ ಕೊನೆಯಲ್ಲಿ ಬರುವ ಪರಿಸ್ಥಿತಿ ಎರಡೇ ವರ್ಷದಲ್ಲಿ ರಾಜ್ಯದಲ್ಲಿ ಬಂದಿದೆ ರಾಜ್ಯದಲ್ಲಿ ಅತ್ಯಂತ ಕೆಟ್ಟ ದುಷ್ಟ ಸರ್ಕಾರ ಇದೆ. ಒಂದೂ ಕೂಡ ಜನಪರ ನಿರ್ಣಯ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.