ವಿಜಯಸಾಕ್ಷಿ ಸುದ್ದಿ, ಗದಗ: ಬಸವಾದಿ ಶಿವಶರಣರ ಪ್ರಣೀತವಾದ ಲಿಂಗಾಯತ ಧರ್ಮ ವೈಜ್ಞಾನಿಕ, ಸರಳ ಆಚರಣೆಗಳ ಧರ್ಮವಾಗಿದೆ. ಶರಣರ ವಚನಗಳು ಲಿಂಗಾಯತರ ಧರ್ಮಗ್ರಂಥ. ಅವುಗಳಲ್ಲಿ ಸಮಾಜಕ್ಕೆ ಬೇಕಾದ ಸರ್ವ ಆಚರಣೆಗಳ ವಿವರಣೆ ಇದೆ. ಆದರೆ, ಈ ಬಗ್ಗೆ ಅರಿಯದೇ ಅನ್ಯಪದ್ಧತಿಗಳ ಪ್ರಭಾವಕ್ಕೆ ಲಿಂಗಾಯತರು ಒಳಗಾಗಿ ನಿಜಾಚರಣೆಗಳನ್ನು ಮಾಡುತ್ತಿಲ್ಲ. ಆದರೆ ಇದೀಗ ವಚನ ಸಾಹಿತ್ಯ ಅಧ್ಯಯನ, ಓದು ಹೆಚ್ಚಾಗುತ್ತಿದ್ದು ಈ ಕಾರಣದಿಂದಾಗಿ ನಮ್ಮವರು ತಮ್ಮ ಅನೇಕ ಕಾರ್ಯಕ್ರಮ, ಆಚರಣೆಗಳಲ್ಲಿ ವಚನಾಧಾರಿತ ಸಂಸ್ಕಾರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆಂದು ಬೇಲೂರಿನ ಶ್ರೀಗುರು ಬಸವೇಶ್ವರಮಠದ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಮಹಾಂತಬಸವಲಿಂಗ ಸ್ವಾಮಿಗಳು ನುಡಿದರು.
ಅವರು ಬಸವದಳದ 1651ನೇ ಶರಣ ಸಂಗಮ ಕಾರ್ಯಕ್ರಮ ಹಾಗೂ ಜಯಶ್ರೀ ಪಿ.ಹಳ್ಳಿಕೇರಿ ಇವರ ಹೊಸಮನೆ `ಬಸವಪ್ರಭು’ ಗುರುಪ್ರವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಇಂದು ಲಿಂಗಾಯತರಲ್ಲಿ ವೈದಿಕ ಪದ್ಧತಿಗಳು ಹಾಸು ಹೊಕ್ಕಾಗಿವೆ. ಈ ಸಂದರ್ಭದಲ್ಲಿ ನಡೆವ ಹೋಮ, ಹವನ, ನವಗ್ರಹ ಸ್ಥಾಪನೆಗಳಂತವು ನಮ್ಮ ಪದ್ಧತಿಗಳು ಅಲ್ಲವೇ ಅಲ್ಲ. ಅವು ವ್ಯರ್ಥ ಖರ್ಚಿನ ಪದ್ಧತಿಗಳಾಗಿವೆ. ಆದರೆ ಇತ್ತೀಚೆಗೆ ಶರಣರ ವಚನಾಧಾರಿತ ನಿಜಾಚರಣೆಗಳನ್ನು ನಮ್ಮವರಿಗೆ ಅರುಹುವಲ್ಲಿ ಬಸವಪರ ಸಂಘಟನೆಗಳು ನಿಧಾನವಾಗಿ ಯಶಸ್ಸು ಕಾಣುತ್ತಿವೆ. ಈ ಪರಿಣಾಮ ಸಮಾಜದ ಜನರು ಅರಿಯುತ್ತಿದ್ದು, ಕ್ರಮೇಣವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ಸರಳ, ಅರ್ಥಪೂರ್ಣ ಆಚರಣೆಗಳಿವು. ನಿಜಾಚರಣೆಗಳನ್ನು ಧರ್ಮೀಯರೆಲ್ಲರೂ ಅಳವಡಿಸಿಕೊಳ್ಳಲೇಬೇಕಾಗಿದೆ.
ಶರಣರು ಸರಳತೆ, ವೈಜ್ಞಾನಿಕತೆಯಿಂದ ನಿಜಾಚರಣೆಗಳ ಬಗ್ಗೆ ವಚನಗಳಲ್ಲಿ ಹೇಳಿದ್ದು ಅದೇ ತೆರನಾಗಿ ಜಯಶ್ರೀ ತಾಯಿಯವರ ಹೊಸಮನೆ ಪ್ರವೇಶ ಕೂಡಾ ಲಿಂಗಾಯತ ಆಚರಣೆಯಂತೆ `ಗುರುಪ್ರವೇಶ’ ಪಡೆದಿದೆ. ಇಂಥ ಸಹಜ, ಸರಳತೆಯ ಅರ್ಥಪೂರ್ಣ ಅಚರಣೆಗಳನ್ನು ಲಿಂಗಾಯತರು ತಮ್ಮ ಮನೆಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಆರಂಭದಲ್ಲಿ ಜಯಶ್ರೀಯವರಿಂದ ಷಟ್ಸ್ಥಲ ಧ್ವಜಾರೋಹಣ ನೆರವೇರಿತು. ಧರ್ಮಗುರು ಬಸವಣ್ಣನವರ ಭಾವಚಿತ್ರ ಮತ್ತು ಧರ್ಮ ಗ್ರಂಥ ವಚನ ಸಾಹಿತ್ಯದೊಂದಿಗೆ ಗುರುಪ್ರವೇಶವಾಯಿತು. ಗಿರಿಜಕ್ಕ ಧರ್ಮರೆಡ್ಡಿಯವರ ಮಾರ್ಗದರ್ಶನದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು.
ಮತ್ತೋರ್ವ ಶರಣರಾದ ಅಶೋಕ ಬರಗುಂಡಿಯವರು ಮಾತನಾಡಿ, ಇಂದು ಸಮಾಜದಲ್ಲಿ ಲಿಂಗಾಯತ ಸಂಸ್ಕಾರದ ಅರಿವು ಹೆಚ್ಚಾಗಬೇಕಿದೆ. ನಮ್ಮವರು ಇಷ್ಟಲಿಂಗದ ಮಹತ್ವ ಅರಿತುಕೊಳ್ಳಬೇಕು. ಇಷ್ಟಲಿಂಗ ಪೂಜೆ, ಶಿವಯೋಗ ಮಹತ್ವದ್ದಾಗಿದೆ. ನಮ್ಮವರು ಕಡ್ಡಾಯವಾಗಿ ನಿತ್ಯ ಲಿಂಗಪೂಜೆ, ಶಿವಯೋಗಗಳನ್ನು ಆಚರಿಸಿಕೊಳ್ಳಿರೆಂದರು.
ಜಯಶ್ರೀ ಹಳ್ಳಿಕೇರಿಯವರು ತಮ್ಮ ಹೊಸ ಮನೆ ಗುರು ಪ್ರವೇಶಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಅಧ್ಯಕ್ಷೀಯ ಭಾಷಣವನ್ನು ವಿ.ಕೆ. ಕರೇಗೌಡ್ರ ಮಾಡಿದರು. ಪ್ರಕಾಶ ಅಸುಂಡಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಗಿರಿಜಕ್ಕನವರು ಇಷ್ಟಲಿಂಗ ಪೂಜೆ ಹಾಗೂ ಶಿವಯೋಗದ ಮಹತ್ವದ ಕುರಿತು ಹೇಳುತ್ತಾ, ಇಂದು ಮಕ್ಕಳಿಗೆ ಲಿಂಗ ಧಾರಣೆ ಅವಶ್ಯಕತೆ ಬಹಳ ಇದೆ. ನಮ್ಮವರಿಗೆ ನಿಜಾಚರಣೆಗಳ ಅರಿವು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸಮಾಜದ ಪ್ರಮುಖ ಸಂಸ್ಥೆಗಳು ಚಿಂತನೆ ನಡೆಸಬೇಕೆಂದರು. ಮಕ್ಕಳಿಗೆ ಇಷ್ಟಲಿಂಗ ದೀಕ್ಷೆ ನೆರವೇರಿಸಿದರು.