ವಿಜಯಸಾಕ್ಷಿ ಸುದ್ದಿ, ಗದಗ: ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ಸೌಜನ್ಯಯುತವಾಗಿ ಉತ್ತಮ ಸೇವೆ ಒದಗಿಸಲು ಬಂಕ್ ಮಾಲೀಕರು ಮುಂದಾಗಬೇಕೆಂದು ಹಿಂದೂಸ್ತಾನ ಪೆಟ್ರೋಲಿಯಂ ಸೌಥ್ ವೆಸ್ಟ್ ಝೋನ್ನ ಮುಖ್ಯಸ್ಥ ಸಂದೀಪ ರೆಡ್ಡಿ ಹೇಳಿದರು.
ಅವರು ಗದುಗಿನ ಹೊಸಬಸ್ ನಿಲ್ದಾಣ ಹತ್ತಿರ ಮಾಜಿ ಸೈನಿಕ ಬಸವರಾಜ ಕೆಂಚಪ್ಪ ಸೂರಣಗಿ ಅವರು ಸ್ಥಾಪಿಸಿದ ಅಡೆಕ್ ಶ್ರೀ ಮೈಲಾರಲಿಂಗೇಶ್ವರ ಪೆಟ್ರೋಲಿಯಂ ಉದ್ಘಾಟಿಸಿ ಮಾತನಾಡಿದರು.
ಹಿಂದೂಸ್ತಾನ್ ಪೆಟ್ರೋಲಿಯಂ ಗ್ರಾಹಕರಿಗೆ ಗುಣಮಟ್ಟದ ಉತ್ಪಾದನೆ ಒದಗಿಸಲು ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಗದುಗಿನ ಹೊಸ ಬಸ್ ನಿಲ್ದಾಣದ ಬಳಿ ಪೆಟ್ರೋಲ್ ಬಂಕ್ ಕೊರತೆಯನ್ನು ನೀಗಿಸಲು ದೇಶ ಸೇವೆ ಮಾಡಿ ಬಂದಿರುವ ಮಾಜಿ ಸೈನಿಕ ಬಸವರಾಜ ಸೂರಣಗಿ ಇದೀಗ ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಮುಂದಾಗಿರುವದು ಅಭಿನಂದನೀಯ ಎಂದರು.
ಚೀಫ್ ರಿಜನಲ್ ಮ್ಯಾನೇಜರ್ ವಿನಯಕಾಂತ ಅಬ್ಬಿಗೇರಿ, ಗದಗ ಹಾವೇರಿಯ ಸೇಲ್ಸ್ ಆಫೀಸರ್ ಪ್ರಥಮೇಶ ಜಾಧವ, ಇಂಜಿನಿಯರಿಂಗ್ ವಿಭಾಗದ ವಿನಿತಾ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಡಾ.ಕಲ್ಲಯ್ಯಜ್ಜನವರು ಹಾಗೂ ಸಂಕದಾಳದ ಹಾಲಸ್ವಾಮಿ ಮಠದ ಪೂಜ್ಯ ವಾಗೀಶ್ವರ ಸ್ವಾಮೀಜಿ ಅವರು ಪೂಜಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು.
ಸಮಾರಂಭದಲ್ಲಿ ಕೆಂಚಪ್ಪ ಸೂರಣಗಿ, ವೀರಪ್ಪ ಕುರಿ, ರಾಕೇಶ ಅಡವಿ, ಹನಮಂತ ಗುಡ್ಡೆಣ್ಣವರ, ಪ್ರೊ. ಹೊನ್ನಪ್ಪನವರ, ಶರೀಫಸಾಬ ಚಬ್ಬಿ, ಪಿ.ವ್ಹಿ. ಕುರಿ, ಹಾಲಪ್ಪ ಸೂರಣಗಿ ಮುಂತಾದವರು ಪಾಲ್ಗೊಂಡಿದ್ದರು. ಮಾಜಿ ಸೈನಿಕ ಬಸವರಾಜ ಸೂರಣಗಿ ನಿರೂಪಿಸಿ ವಂದಿಸಿದರು. ಪೆಟ್ರೋಲ್ ಬಂಕ್ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕರೆ ನೀಡಲಾಯಿತು.