ತಮಿಳು ಚಿತ್ರರಂಗದ ಖ್ಯಾತ ನಟ ಶ್ರೀಕಾಂತ್ ಅವರನ್ನುಪೊಲೀಸರು ಬಂಧಿಸಿದ್ದಾರೆ. ನಟನ ವಿರುದ್ಧ ಮಾದಕ ವ್ಯಸನದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರು ಬಂಧಿಸಿದ್ದು ನುಂಗಂಬಾಕ್ಕಂ ಪೋಲಿಸ್ ಠಾಣೆಯಲ್ಲಿ ನಟನನ್ನು ವಿಚಾರಣೆ ಮಾಡಲಾಗುತ್ತಿದೆ.
ಮೂಲಗಳ ಪ್ರಕಾರ ಪೊಲೀಸರು ನುಂಗಂಬಕ್ಕಂ ಸರೋವರ ಪ್ರದೇಶದಲ್ಲಿರುವ ಶ್ರೀಕಾಂತ್ ಅವರ ನಿವಾಸದಲ್ಲಿ ಶೋಧ ನಡೆಸಿದ್ದು, ಈ ವೇಳೆ ನಟನ ಮನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಕೊಕೇನ್ ಪತ್ತೆಯಾಗಿದೆ. ಸದ್ಯ ಅದನ್ನೂ ಅವಕ್ಕೆ ಪಡೆದುಕೊಂಡಿರುವ ಪೊಲೀಸರು ಶ್ರೀಕಾಂತ್ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಸಾದ್ ಎನ್ನುವವರ ಜೊತೆ ಸಂಪರ್ಕ ಹೊಂದಿದ್ದರಿಂದ ನಟನನ್ನು ಬಂಧಿಸಲಾಗಿದೆ. ಪ್ರಸಾದ್ ಎನ್ನುವವರು AIADMK ಪಕ್ಷದ ಮಾಜಿ ಕಾರ್ಯಕರ್ತರಾಗಿದ್ದು ಈ ಹಿಂದೆ ಪ್ರಸಾದ್ ಅವರನ್ನು ಚೆನ್ನೈ ನಗರದಲ್ಲಿನ ಪಬ್ವೊಂದರ ಜಗಳಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು.
ಮಾದಕವಸ್ತು ಪ್ರಕರಣದಲ್ಲಿ ಶ್ರೀಕಾಂತ್ ಬಂಧನವನ್ನು ದೃಢಪಡಿಸುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಇತ್ತೀಚೆಗೆ ಬಂಧಿಸಲಾದ ಮೂವರು ಮಾದಕವಸ್ತು ಅಪರಾಧಿಗಳೊಂದಿಗೆ ಶ್ರೀಕಾಂತ್ ನಿಯಮಿತವಾಗಿ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ.
ತಮಿಳು, ತೆಲುಗು ಸಿನಿಮಾಗಳಲ್ಲಿ ಶ್ರೀಕಾಂತ್ ಅವರು ಹೆಚ್ಚಿನ ಮನ್ನಣೆ ಪಡೆದುಕೊಂಡಿದ್ದಾರೆ. 2022ರಲ್ಲಿ ತಮಿಳಿನ ರೋಜಾ ಕೂಟ್ಟಮ್ ಎನ್ನುವ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ಶ್ರೀಕಾಂತ್ ಆ ಬಳಿಕ ಏಪ್ರಿಲ್ ಮಾಧಥಿಲ್, ಮನಸೆಲ್ಲಮ್ ಮತ್ತು ಪ್ರತಿಭಾನ್ ಕನವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಶ್ರೀಕಾಂತ್ ಅವರು ಕೊನೆಯದಾಗಿ 2025ರ ಮಾರ್ಚ್ 14ರಂದು ಬಿಡುಗಡೆಯಾದ ಕೊಂಜಮ್ ಕಾದಲ್ ಕೊಂಜಮ್ ಮೊದಾಲ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು.