ಚಾಮರಾಜನಗರ:- ಚಾಮರಾಜನಗರದಲ್ಲಿ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ವಿಷಪ್ರಾಶನದಿಂದ ಹುಲಿಗಳು ಸಾವನ್ನಪ್ಪಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಈ ದಿನಗಳಲ್ಲಿ, ಐದು ಹುಲಿಗಳನ್ನು ವಿಷವಿಕ್ಕಿ ಕೊಂದಿರುವುದು ಆಘಾತಕಾರಿಯಾಗಿದೆ.
ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳ ಅಸಹಜ ಸಾವು ತಲ್ಲಣ ಉಂಟುಮಾಡಿದೆ. ಹೂಗ್ಯಂ ಅರಣ್ಯ ವಲಯದ ಮೀಣ್ಯಂ ಸಮೀಪ ಮಹದೇಶ್ವರ ಗುಡಿ ಬಯಲಿನಲ್ಲಿ ಈ ಐದೂ ಹುಲಿಗಳು ಸತ್ತುಬಿದ್ದಿವೆ. ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಐದು ಹುಲಿಗಳ ಮೃತದೇಹ ಪತ್ತೆಯಾಗಿದ್ದು, ಅನತಿ ದೂರದಲ್ಲಿ ಹಸುವೊಂದರ ಮೃತದೇಹವೂ ಕಂಡು ಬಂದಿದೆ.
ವನ್ಯಪ್ರಾಣಿಯ ದಾಳಿಯಿಂದ ಹಸು ಸಾವನ್ನಪ್ಪಿದ್ದು, ಇದರ ಅರ್ಧಂಬರ್ಧ ದೇಹವನ್ನು ವನ್ಯಪ್ರಾಣಿಗಳು ತಿಂದು ಹೋಗಿವೆ. ಉಳಿದ ಮಾಂಸ ತಿನ್ನಲು ವನ್ಯಪ್ರಾಣಿ ಬರಬಹುದು ಎಂಬ ಕಾರಣಕ್ಕೆ ಅದನ್ನು ಕೊಲ್ಲಲು ಹಸುವಿನ ಮಾಂಸಕ್ಕೆ ಯಾರೋ ವಿಷ ಸಿಂಪಡಣೆ ಮಾಡಿರಬಹುದು ಎಂಬ ಗುಮಾನಿ ಇದೆ. ವಿಷ ಮಿಶ್ರಿತ ಹಸುವಿನ ಮಾಂಸ ತಿಂದು ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.