ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಯಾವುದೇ ಸಮಾಜದವರಿರಲಿ, ಎಲ್ಲರೂ ಮೊದಲು ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ವಂಚಿತರಾದ ಭೋವಿ ಮತ್ತಿತರ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಬೇಕೆಂದು ರೋಣ ಶಾಸಕ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಭೋವಿ ಕಾಲೋನಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರ 131ನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗದಲ್ಲಿ ಜನಿಸಿ, ಸಾಧನೆಗೈದ ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ನೋಡಿಯೇ ನೀವು ಕಲಿಯಬೇಕು. ಓದಿನಿಂದಲೇ ಮುಂದೆ ಬಂದ ಅವರು ಈ ದೇಶಕ್ಕೆ ಒಪ್ಪುವ ಸಂವಿಧಾನವನ್ನು ನೀಡಿದ ಮಹನೀಯರು. ಕೇಂದ್ರದ ಕಾನೂನು ಸಚಿವರಾಗಿಯೂ ಅವರು ಮಾಡಿದ ಕಾರ್ಯ ಸಣ್ಣದೇನಲ್ಲ. ಅಂದರೆ ವಿದ್ಯೆ ಯಾವ ವ್ಯಕ್ತಿಯನ್ನು ಬೇಕಾದರೂ ಅತ್ಯಂತ ಎತ್ತರದ ಮಟ್ಟಕ್ಕೆ ಒಯ್ಯಬಲ್ಲುದು ಎಂಬುದನ್ನು ಇದರಿಂದ ತಿಳಿಯಬೇಕು. ಇಂತಹ ಮಹನೀಯರ ಕಥೆಗಳನ್ನು ನಿಮ್ಮ ಮಕ್ಕಳಿಗೆ ಹೇಳಿ ಅವರಲ್ಲಿ ವಿದ್ಯಾಭ್ಯಾಸದ ಕಿಚ್ಚನ್ನು ಹಚ್ಚಲು ಪಾಲಕರು ಮುಂದಾಗಬೇಕೆAದು ಹೇಳಿದರು.
ಸಮಾರಂಭದಲ್ಲಿ ಶಾಸಕರು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಶಾಸಕ ಜಿ.ಎಸ್. ಪಾಟೀಲ ಪಟ್ಟಣದ ಈಶ್ವರ ನಗರದಲ್ಲಿನ ಸಾಯಿಬಾಬಾ ದೇವಸ್ಥಾನದ ಸಮೀಪದ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಯುವ ಧುರೀಣ ಮಿಥುನ ಪಾಟೀಲ, ಸ್ಥಾಯಿ ಸಮಿತಿ ಚೇರಮನ್ ಮುತ್ತಪ್ಪ ನೂಲ್ಕಿ, ವಾರ್ಡ್ ಸದಸ್ಯರಾದ ದಾವುದ್ ಅಲಿ ಕುದರಿ, ಮೈಲಾರಪ್ಪ ಚಳ್ಳಮರದ, ಸಂತೋಷ ಮಣ್ಣೊಡ್ಡರ, ಅಕ್ಕಮ್ಮ ಮಣ್ಣೊಡ್ಡರ ಇತರರಿದ್ದರು.