ವಿಜಯಸಾಕ್ಷಿ ಸುದ್ದಿ, ಗದಗ: ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ ಹಾಗೂ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಮಾರ್ಗದರ್ಶದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ವಿರೇಶ್ವರ ಪುಣ್ಯಾಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತ ಉಭಯ ಗುರುಗಳ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದು ಕಪೋತಗಿರಿ ನಂದಿವೇರಿ ಶ್ರೀಮಠದ ಪೂಜ್ಯಶ್ರೀ ಶಿವಕುಮಾರ ಶ್ರೀಗಳು ಹೇಳಿದರು.
ಅವರು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪೂಜ್ಯಶ್ರೀ ಕಲ್ಲಯ್ಯಜ್ಜನವರ 55ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತುಲಾಭಾರ ಸೇವೆ ನೆರವೇರಿಸಿ ಮಾತನಾಡಿದರು.
ಪೂಜ್ಯಶ್ರೀ ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಪುಣ್ಯಾಶ್ರಮವು ಉತ್ತರೋತ್ತರವಾಗಿ ಅಭಿವೃದ್ದಿಗೊಳ್ಳಲಿ. ಹಾನಗಲ್ ಶ್ರೀಗುರು ಕುಮಾರೇಶ್ವರರ, ಪಂ. ಪಂಚಾಕ್ಷರ ಗವಾಯಿಗಳವರ ಹಾಗೂ ಪಂ. ಪುಟ್ಟರಾಜ ಗವಾಯಿಗಳವರ ಶ್ರೀರಕ್ಷೆ ಕಲ್ಲಯ್ಯಜ್ಜನವರ ಮೇಲೆ ಸದಾ ಇರಲಿದೆ ಎಂದು ಶುಭ ಹಾರೈಸಿದರು.
ಲಿಂಗಸೂರಿನ ಮಾಣಿಕೇಶ್ವರಿ ಅಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಪೂಜ್ಯಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಸೇವೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ನಂದಿಶ್ವರಿ ಅಮ್ಮನವರಿಗೆ `ನಡೆದಾಡುವ ನಕ್ಷತ್ರ’ ಎಂಬ ಬಿರುದು ನೀಡಿ ಶ್ರೀಮಠದಿಂದ ಗೌರವಿಸಲಾಯಿತು.
ವೇದಿಕೆ ಮೇಲೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ-ಡಾವಣಗೆರೆ ಸೋಲ್ಟ್ರಸ್ಟ್ನ ಸದಸ್ಯರಾದ ಪಿ.ಎಫ್. ಕಟ್ಟಿಮನಿ, ಪಿ.ಸಿ. ಹಿರೇಮಠ, ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ, ಜೋಹರಾ ಕೌತಾಳ, ಜೇವರ್ಗಿಯ ನಾಡಗೌಡ ಅಪ್ಪಾಸಾಬ ಪಾಟೀಲ, ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕರಾದ ಹೇಮರಾಜಶಾಸ್ತ್ರಿ ಹಿರೇಮಠ ಹೆಡಿಗ್ಗೊಂಡ ಮುಂತಾದವರು ಉಪಸ್ಥಿತರಿದ್ದರು.