ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಏಕಾಏಕಿ ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದು, ಈ ಬೆಳವಣಿಗೆ ಕರ್ನಾಟಕದ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳಿಗೆ ದಾರಿ ಮಾಡಿದೆ. ಈ ಹುದ್ದೆ ಮೂಲಕ ಸಿದ್ದರಾಮಯ್ಯ ರಾಷ್ಟ್ರಮಟ್ಟದ ರಾಜಕಾರಣದತ್ತ ಸಾಗಲಿದ್ದಾರೆ ಎಂಬ ಊಹಾಪೋಹಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ. ಈ ನೇಮಕಾತಿಯ ಮೂಲಕ ಹೈಕಮಾಂಡ್ ಎರಡು ಉದ್ದೇಶಗಳನ್ನ ಸಾಧಿಸಲು ಯತ್ನಿಸುತ್ತಿದೆ ಎನ್ನಲಾಗುತ್ತಿದೆ,
ಒಬಿಸಿ ಸಮುದಾಯದಲ್ಲಿ ಕಾಂಗ್ರೆಸ್ ಪಕ್ಷದ ಬಡಾವಣಾ ಜತೆಗೆ ರಾಷ್ಟ್ರಮಟ್ಟದಲ್ಲಿ ಸಂಘಟನೆಯ ಬಲವರ್ಧನೆ ಮತ್ತು ರಾಜ್ಯದೊಳಗಿನ ನಾಯಕತ್ವ ಬದಲಾವಣೆಯತ್ತ ಸಿದ್ಧತೆಯಾಗಿದ್ದು,
ಜುಲೈ 15ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಆವರಣದ ಭಾರತ್ ಜೋಡೊ ಭವನದಲ್ಲಿ ಒಬಿಸಿ ಸಲಹಾ ಮಂಡಳಿಯ ಮೊದಲ ಸಭೆ ನಡೆಯಲಿದೆ. ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ 90ಕ್ಕೂ ಹೆಚ್ಚು ಒಬಿಸಿ ನಾಯಕರು ಪಾಲ್ಗೊಳ್ಳಲಿದ್ದು,
ಅವರಲ್ಲಿ 5 ಮಾಜಿ ಮುಖ್ಯಮಂತ್ರಿಗಳು ಹಾಗೂ 10ಕ್ಕೂ ಹೆಚ್ಚು ಮಾಜಿ ಕೇಂದ್ರ ಸಚಿವರು ಇರಲಿದ್ದಾರೆ. ಹೆಚ್ಚುವರಿ ಜವಾಬ್ದಾರಿ ಪಡೆದ ಸಿದ್ದರಾಮಯ್ಯನವರು ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಿಂದ ನಿಧಾನವಾಗಿ ದೂರವಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಪಕ್ಷದ ಒಳಗೆಯೇ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ “ಆಗಸ್ಟ್–ಸೆಪ್ಟೆಂಬರ್ ಕ್ರಾಂತಿ” ಎಂಬ ಪಕ್ಷದೊಳಗಿನ ಚರ್ಚೆ ಇನ್ನಷ್ಟು ಬಲ ಪಡೆದುಕೊಂಡಿದೆ.