ವಿಜಯಸಾಕ್ಷಿ ಸುದ್ದಿ, ಡಂಬಳ: ಭಾನುವಾರ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಸೇರಿ ಸಂಭ್ರಮದಿಂದ ಆಚರಿಸಿದರು. ವಿವಿಧೆಡೆ ಸ್ಥಾಪಿಸಿದ ಅಲಾಯಿ ದೇವರನ್ನು ಜನರು ಭಕ್ತಿ ಭಾವದಿಂದ ಆರಾಧಿಸಿದರು. ಕೆಲ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ಇಲ್ಲದಿದ್ದರೂ ಸಹ ಹಿಂದೂಗಳೇ ಮುಂದಾಳತ್ವ ವಹಿಸಿ ಹಬ್ಬ ಆಚರಿಸಿದರು.
ಮುಂಜಾನೆ ಅಲಾಯಿ ದೇವರು ಭೇಟಿ ಕೊಡುವ ವೇಳೆ ಎರಡು ಗುಂಗಾಡಿಯ ಹುಳುಗಳು ಬಂದು ಅಲಾಯಿ ದೇವರ ಸುತ್ತ ಪ್ರದಕ್ಷಿಣೆ ಹಾಕುವ ಮೂಲಕ ಮಾಯವಾಗುತ್ತಿದ್ದು, ಡಂಬಳ ಕೋಟೆಯಿಂದ ಈ ಗುಂಗಾಡಿ ಹುಳುಗಳು ಬರುತ್ತವೆ ಎಂದು ಜನರಲ್ಲಿ ನಂಬಿಕೆ ಇದೆ. ಇಂದಿಗೂ ಆ ಗುಂಗಾಡಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ನೋಡಿದ ಜನರು ನಮಸ್ಕರಿಸಿ ಸಂತಸದಿಂದ ಚಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಭಾನುವಾರ ಸಂಜೆ ಅಲಾಯಿ ದೇವರ ಮೆರವಣಿಗೆ ಜರುಗಿತು. ಜನರು ಹೂವಿನ ಹಾರ ಹಾಕಿ, ಸಕ್ಕರೆ ನೈವೇದ್ಯ ಸಮರ್ಪಿಸಿ ಭಕ್ತಿ ಮೆರೆದರು. ಅಲಾಯಿ ದೇವರು ಸ್ಥಾಪನೆಯಾದ ದಿನದಿಂದ ಜನರು ಮಸೀದಿಗೆ ಆಗಮಿಸಿ ಹರಕೆ ತೀರಿಸಿದರು. ಅಲಾಯಿ ದೇವರ ವಿಜರ್ಸನೆ ದಿನ ಗ್ರಾಮದ ಯುವಕರ ತಂಡ ವಿವಿಧ ಸಾಂಸ್ಕೃತಿಕ ಜಾನಪದ ಹಾಡುಗಳನ್ನು ಹಾಡುತ್ತಾ ಹಲಗೆ ಮೇಳಕ್ಕೆ ಹೆಜ್ಜೆ ಹಾಕಿದರು. ಅಲಾಯಿ ದೇವರ ಮೆರವಣಿಗೆಗೆ ಸಂದರ್ಭದಲ್ಲಿ ಮುಂಡರಗಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.