ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ಖ್ಯಾತ ವೈದ್ಯ ದಿ. ಡಾ. ತುಕಾರಾಮ ಮಹೇಂದ್ರಕರ ಇವರ ಸ್ಮರಣಾರ್ಥ, ವೈದ್ಯರ ದಿನಾಚರಣೆಯ ನಿಮಿತ್ತ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೇಶವ ದೇವಾಂಗ, ಮನುಷ್ಯನಿಗೆ ಕಣ್ಣುಗಳು ಅತ್ಯಮೂಲ್ಯವಾದ ಅಂಗವಾಗಿದೆ. ಕಣ್ಣುಗಳ ಆರೋಗ್ಯವನ್ನು ಜಾಗ್ರತೆಯಿಂದ ಕಾಯ್ದುಕೊಳ್ಳಬೇಕು. ಕಣ್ಣುಗಳ ಸಮಸ್ಯೆ ಇದ್ದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಅವುಗಳನ್ನು ರಕ್ಷಿಸಿಕೊಳ್ಳಬೇಕು. ಪ್ರತಿಯೊಬ್ಬರೂ ನೇತ್ರದಾನವನ್ನು ಮಾಡಲು ಮುಂದಾಗಬೇಕೆಂದು ಹೇಳಿದರು.
ಡಾ. ಸುನೀಲ ಬುರಬುರೆ ಮಾತನಾಡಿ, ಶಿರಹಟ್ಟಿ ಪಟ್ಟಣದಲ್ಲಿ ಡಾ. ಟಿ.ಎಂ. ಮಹೇಂದ್ರಕರ ಓರ್ವ ಶ್ರಮಜೀವಿಯಾಗಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಕಾ ಸೇವೆಯನ್ನು ಸಲ್ಲಿಸುವುದರ ಜೊತೆಗೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.
ಪುನೀತ್ ಓಲೇಕಾರ, ಡಾ. ಪ್ರಸಾದ ಮಹೇಂದ್ರಕರ, ಡಾ. ಅಬ್ದುಲ್ ಢಾಲಾಯತ, ಡಾ. ಪ್ರಭುಗೌಡ ಪಾಟೀಲ, ಶಿವಮೊಗ್ಗ ಕಣ್ಣಿನ ಆಸ್ಪತ್ರೆಯ ಡಾ. ಪ್ರೀತಿ ಬಿ.ಬಿ, ಡಾ. ಪವನ್ ಮಹೇಂದ್ರಕರ ಸೇರಿದಂತೆ ತಾಲೂಕಾ ವೈದ್ಯರ ಸಂಘದ, ಔಷಧ ವಿತರಕರ ಮತ್ತು ರಕ್ತ ತಪಾಸಣಾ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.