ವಿಜಯಸಾಕ್ಷಿ ಸುದ್ದಿ, ಗದಗ: ಕಾರ್ಮಿಕ ವಿರೋಧಿ ಸಂಹಿತೆಗಳನ್ನು ರದ್ದುಪಡಿಸಲು, ರೈತ ಕಾರ್ಮಿಕರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ಗದಗ ಜಿಲ್ಲಾ ಸಮಿತಿಯ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಸಿಐಟಿಯು ಗದಗ ಜಿಲ್ಲಾ ಸಂಚಾಲಕ ಮಹೇಶ ಹಿರೇಮಠ ಮಾತನಾಡಿ, ದೇಶದ ಕಾರ್ಮಿಕ ವರ್ಗದ ತೀವ್ರ ವಿರೋಧವನ್ನೂ ಲೆಕ್ಕಿಸದೇ 2020ರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹಾಗೂ 2019ರ ಸಂಸತ್ತಿನ ಅಧಿವೇಶನದಲ್ಲಿ ದೇಶದಲ್ಲಿ ಜಾರಿಯಲ್ಲಿದ್ದ 29 ಕಾರ್ಮಿಕ ಕಾನೂನುಗಳ ಬದಲಾಗಿ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಸಂಹಿತೆ ಹಾಗೂ ವೇತನ ಸಂಹಿತೆಗಳನ್ನಾಗಿ ಅಂಗೀಕರಿಸಲಾಗಿದೆ. ದೇಶದ ಕಾರ್ಮಿಕ ವರ್ಗದ ತೀವ್ರ ಹೋರಾಟಗಳಿಂದಾಗಿ ಈ ಸಂಹಿತೆಗಳು ಇನ್ನೂ ಜಾರಿಮಾಡಲು ಸಾಧ್ಯವಾಗಿಲ್ಲವಾದರೂ ಮತ್ತೆ ಸರಕಾರ ಈ ಸಂಹಿತೆಗಳನ್ನು ಜಾರಿಮಾಡಲು ಮುಂದಾಗುತ್ತಿದೆ.
ಈ ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಹಾಗೂ ಇತರೆ ರೈತ ಕಾರ್ಮಿಕರ ಬೇಡಿಕೆಗಳಿಗಾಗಿ ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹಾಗೂ ದೇಶದ ಎಲ್ಲಾ ರೈತ ಸಂಘಟನೆಗಳನ್ನೊಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ಇಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಮುಷ್ಕರ ನಡೆಸಿ ದುಡಿಯುವ ಜನರ ಹಕ್ಕೊತ್ತಾಯಗಳ ಮನವಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸಲ್ಲಿಸಲಾಗುತ್ತಿದೆ ಎಂದರು.
ಅAಗನವಾಡಿ, ಬಿಸಿಯೂಟ, ಆಶಾ ಮುಂತಾದ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ರಾಜ್ಯದಲ್ಲಿ ರೈತ ವಿರೋಧಿ ತಿದ್ದಪಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಅತ್ಯುನ್ನತ ಪಕ್ಷೀಯ ಸಂಸ್ಥೆಯಾದ ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್ಸಿ) ನಡೆಸಬೇಕು. ವಿದ್ಯುತ್ ಶಕ್ತಿ ಮಸೂದೆ-2020 ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾರುತಿ ಚಿಟಗಿ, ಮೈಬು ಹವಲ್ದಾರ, ಹನಮಂತ ಮಾದರ, ಮುತ್ತಪ್ಪ ಚಲವಾದಿ, ಶಾರದಾ ರೋಣದ, ಶಾರದಾ ಹಳೆಮನಿ, ಗಿರಿಜಾ ಮಾಚಕನೂರ, ಅಕ್ಕಮ್ಮ ನೆರೆಗಲ್ಲ ಜ್ಯೋತಿ ಹಿರೇಮಠ, ಸುಶಿಲಾ ಚಲವಾದಿ, ಕಮಲಾಕ್ಷಿ ಬಿಳಗಿ, ಗಂಗಮ್ನ ದೇವರಡ್ಡಿ, ಮಂಗಲಾ ಪಟ್ಟಣಶಟ್ಟಿ ಗೀತಾ ಪಾಟೀಲ, ನೀಲಮ್ಮ ಹಿರೇಮಠ, ವಾಲಿ, ಯಶೋದಾ ಬೇಟಗೆರಿ, ನಾಗರತ್ನ ಬಡಗನ್ನವರ, ವಿಜಯಲಕ್ಷ್ಮೀ, ಪ್ರೇಮಾ, ಹಾಲಪ್ಪ ತಾಂಬ್ರಗುಂಡಿ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ದುಡಿತದ ಅವಧಿಯನ್ನು ದಿನಕ್ಕೆ 10-12 ಗಂಟೆಗೆ ಹೆಚ್ಚಿಸುವ ಅವೈಜ್ಞಾನಿಕ ಪ್ರಸ್ತಾವಗಳನ್ನು ಕೈಬಿಡಬೇಕು. ಜೀವನ ಯೋಗ್ಯ ಕನಿಷ್ಠ ವೇತನ ರೂ 36,000 ನಿಗದಿ ಮಾಡಬೇಕು. ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ ರೂ. 8000 ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿ ರೂ. 600ಕ್ಕೆ ದುಡಿತದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು ಇವೇ ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.