ವಿಜಯಸಾಕ್ಷಿ ಸುದ್ದಿ, ಗದಗ: ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರಸೇನೆಯ ಸಂಘಟನೆ ನಿರ್ಮಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಗಳ ಮೇಲೆ ಆಕ್ರಮಣ ಮಾಡುವ ಇಸ್ಲಾಮೀ ಸುಲ್ತಾನರ ವಿರುದ್ಧ ಸಾಮಾನ್ಯ ಮಾವಳೆಗಳ ಸಂಘಟನೆಯನ್ನು ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಘಟನೆಯು ಧರ್ಮಕ್ಕಾಗಿ ತ್ಯಾಗ ಮಾಡುವ ಪ್ರೇರಣಾದಾಯಿ ವಿಚಾರದ ಮೇಲೆ ಆಗಿತ್ತು. ಇಂತಹ ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಮತ್ತು ಹಿಂದವೀ ಸ್ವರಾಜ್ಯ ಸಾಕಾರಗೊಳ್ಳುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಯಮನಪ್ಪ ಭಜಂತ್ರಿ ಹೇಳಿದರು.
ಅವರು ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು.
ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ. ಹಿಂದೆ ಪ್ರಭು ಶ್ರೀರಾಮರ ಕಾಲದಲ್ಲಿ, ಶಿವಾಜಿ ಮಹಾರಾಜರ ಕಾಲದಲ್ಲಿ, ಹಕ್ಕ ಬುಕ್ಕರ ಕಾಲದಲ್ಲಿ ಇದೇ ರೀತಿ ಧರ್ಮಸಂಕಟಗಳು ಎದುರಾಗಿದ್ದವು. ಈ ಎಲ್ಲ ಸಂದರ್ಭಗಳಲ್ಲಿಯೂ ಅವರು ಗುರುಗಳ ಮಾರ್ಗದರ್ಶನ ಪಡೆದು ಧರ್ಮಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಹಾಗಾಗಿ ಗುರು-ಶಿಷ್ಯ ಪರಂಪರೆಗೆ ಹಿಂದಿನಿಂದಲೂ ಅಷ್ಟೇ ಮಹತ್ವವಿದೆ. ಈಗ ನಾವೂ ಸಹ ಇಂದಿನ ಗುರುಪೂರ್ಣಿಮೆಯ ದಿನ ಧರ್ಮಸಂಸ್ಥಾಪನೆಗಾಗಿ ಸಂಘಟಿತರಾಗಲು ಸಂಕಲ್ಪ ಮಾಡಬೇಕಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯರಾದ ಶ್ರೀಪತಿ ಭಟ್ ಮಾತನಾಡಿ, ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದನ್ನು ಮುಂದಿನ ಪೀಳಿಗೆಯವರು ಪಾಲಿಸಬೇಕಾದರೆ ಈಗಿನಿಂದಲೇ ಒಗ್ಗಟ್ಟಾಗಿ ಕಾರ್ಯ ಮಾಡಬೇಕಿದೆ ಎಂದರು.