ಜೈನ ಪರಂಪರೆಯ ಸಂರಕ್ಷಣೆ ಎಲ್ಲರ ಕರ್ತವ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: 101 ದೇವಾಲಯ, 101 ಕಲ್ಯಾಣಿಗಳನ್ನು ಹೊಂದಿರುವ ಇತಿಹಾಸ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಜೈನ ಬಸದಿಗಳನ್ನು ಅಭಿವೃದ್ಧಿಪಡಿಸುವುದರೊಂದಿಗೆ ಅವುಗಳ ಸಂರಕ್ಷಣೆಗೆ ಕಂಕಣಬದ್ಧರಾಗಿ ನಿಂತಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ಶ್ರವಣಬೆಳಗೋಳದ ಚಾರುಕೀರ್ತಿ ಭಟ್ಟಾಚಾರ್ಯ ಪಂಡಿತಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಇಲ್ಲಿಯ ಪ್ರಾಚೀನ ಸ್ಮಾರಕಗಳನ್ನು ವೀಕ್ಷಿಸಿ ಮಾತನಾಡಿದ ಶ್ರೀಗಳು, ಈ ಭಾಗದಲ್ಲಿ ಹೆಚ್ಚು ಪ್ರಾಚೀನ ಸ್ಮಾರಕಗಳಿವೆ ಎಂಬುದು ಇತಿಹಾಸದ ಪುಸ್ತಕಗಳಿಂದ ತಿಳಿದಿದ್ದು, ಪ್ರವಾಸೋದ್ಯಮ ಇಲಾಖೆ, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ವ ಇಲಾಖೆಯು ಅವುಗಳ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯ. ಈ ಯುಗದಲ್ಲಿ 6 ಕಾಲಚಕ್ರಗಳು ಬರುತ್ತವೆ. ಅದರಂತೆ ಇದು ಪಂಚಮಕಾಲವಾಗಿದೆ. ಇಲ್ಲಿರುವ ಜೈನ ಬಸದಿಯಲ್ಲಿ ನೇಮಿನಾಥ ತೀರ್ಥಂಕರ ಮೂರ್ತಿಯಿದೆ. ಪ್ರಾಚೀನ ಕಾಲದಿಂದಲೂ 24 ತೀರ್ಥಂಕರರು ಆಳಿದ್ದು ಕೊನೆಯದಾಗಿ ಭಗವಾನ ಮಹಾವೀರರು ರಾಜರಾಗಿದ್ದರು.

ಭೂತಕಾಲದಿಂದ ಭವಿಷ್ಯತ್ ಕಾಲದವರೆಗೂ 24 ತೀರ್ಥಂಕರರು ಇದ್ದೇ ಇರುತ್ತಾರೆ ಎಂದು ಜೈನ ಸಿದ್ದಾಂತಗಳು ಹೇಳುತ್ತವೆ. ಇಲ್ಲಿ ದೊರೆತ ಅವಶೇಷಗಳಲ್ಲಿ ಜೈನ ಶಾಸನಗಳು, ಮೂರ್ತಿಗಳು, ಶಿಲ್ಪ ಕಲೆಗಳಿವೆ. ದೇಶಾದ್ಯಂತ ಜೈನ ಮಂದಿರಗಳು, ಸ್ಮಾರಕಗಳು, ಕಾಣಸಿಗುತ್ತವೆ. ಭಾರತವು ಹಿಂದಿನಿಂದಲೂ ಸಂಪದ್ಭರಿತ ನಾಡಾಗಿದ್ದು, ಇಲ್ಲಿಯ ಶಿಲ್ಪ ಕಲೆ, ಸಂಸ್ಕೃತಿಯು ಜೈನ ರಾಜರ ನೆಲೆಯಾಗಿತ್ತು. ವಿದೇಶೀಯರು ಈ ಜೈನ ಧರ್ಮದ ಮೇಲೆ ಅಕ್ರಮಣ ಮಾಡಿ ನಾಶ ಮಾಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಪಂಪ, ರನ್ನ, ಪೊನ್ನ ಮತ್ತು ಚನ್ನ ಕವಿಗಳು ಕನ್ನಡಕ್ಕಾಗಿ ತಮ್ಮ ಅಮೋಘ ಕೊಡುಗೆಯನ್ನು ನೀಡಿದ್ದಾರೆ. ಜೈನರ ಪರಂಪರೆ, ಸಂಸ್ಕೃತಿಯನ್ನು ಸಂರಕ್ಷಣೆ ಮಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ಕಳೆದ ವಾರ ಶ್ರವಣಬೆಳಗೋಳಕ್ಕೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವರು ನಮ್ಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಇಂಗಿತವನ್ನು ತಿಳಿಸಿದ್ದಾರೆ. ಪ್ರಾಚೀನ ಸ್ಮಾರಕಗಳ ಬಗ್ಗೆ ಅವರಿಗಿರುವ ಕಾಳಜಿ ಹಿರಿದು ಎಂದರು.

ಚಾರುಕೀರ್ತಿ ಭಟ್ಟಾಚಾರ್ಯರು ಹಾಗೂ ವರೂರು ಕ್ಷೇತ್ರದ ಅಮೀನಭಾವಿಯ ಧರ್ಮಸೇನಾ ಪಟ್ಟಾಧ್ಯಕ್ಷರನ್ನು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ, ಜಿ.ಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಸನ್ಮಾನಿಸಿ ಗೌರವಿಸಿದರು. ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಕೊಟ್ರೇಶ ವಿಭೂತಿ, ಗದಗ ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಬಿ.ಎ. ಕುಲಕರ್ಣಿ, ಅಜ್ಜಪ್ಪಗೌಡ ಪಾಟೀಲ, ಗ್ರಾ.ಪಂ ಮಾಜಿ ಸದಸ್ಯ ಅಣ್ಣಪ್ಪ ಬಸ್ತಿ ಇದ್ದರು.

ಬ್ರಹ್ಮಜಿನಾಲಯ, ನಾಗನಾಥ, ನನ್ನೇಶ್ವರ, ಕಾಶಿ ವಿಶ್ವನಾಥ ಹಾಗೂ ಮುಸ್ಕಿನಭಾವಿಯಲ್ಲಿರುವ ಶಿಲ್ಪಕಲೆ ಹಾಗೂ ಪ್ರಾಚ್ಯಾವಶೇಷಗಳ ವಸ್ತು ಸಂಗ್ರಾಲಯವನ್ನು ವೀಕ್ಷಿಸಿದ ಶ್ರೀಗಳು, ಶಿಲ್ಪಕಲೆಯ ಇತಿಹಾಸವನ್ನು ಇತಿಹಾಸ ತಜ್ಞ ಅ.ದ. ಕಟ್ಟಿಮನಿಯವರಿಂದ ತಿಳಿದುಕೊಂಡು ಸಂತಸಪಟ್ಟರು. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಲಕ್ಕುಂಡಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಸ್ಮಾರಕಗಳು, ಪ್ರಾಚ್ಯಾವಶೇಷಗಳು ಹಾಗೂ ಉತ್ಖನನದ ಕುರಿತು ಸರಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು.


Spread the love

LEAVE A REPLY

Please enter your comment!
Please enter your name here