ವಿಜಯಸಾಕ್ಷಿ ಸುದ್ದಿ, ಗದಗ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದ್ದು, ಇದುವರೆಗೂ ದುರಾಡಳಿತವೇ ಇವರ ಸಾಧನೆಯಾಗಿದೆ. ಅದನ್ನು ಸಾರಲು ಮೈಸೂರಿನಲ್ಲಿ ಸಾಧನಾ ಸಮಾವೇಶ ಮಾಡಲಿದೆ ಎಂದು ಬಿಜೆಪಿ ಗದಗ ಯುವ ಮೊರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಆಕ್ಷೇಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನರನ್ನು ನಂಬಿಸಿ ಗರಿಷ್ಠ ಬಹುಮತ ಪಡೆದು ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷ ಜನರಿಗೆ ದ್ರೋಹ, ಅನ್ಯಾಯ, ಭ್ರಷ್ಟಾಚಾರವನ್ನೇ ಮಾಡುತ್ತ ಬಂದಿದೆ. ಪ್ರಾರಂಭದ ದಿನದಿಂದ ಮುಡಾ, ವಾಲ್ಮೀಕಿ ನಿಗಮದಲ್ಲಿ ನಡೆದ ನೂರಾರೂ ಕೋಟಿ ರೂಪಾಯಿಗಳ ಅನೇಕ ಹಗರಣ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲೆಗೆ ಹೊಡೆದಂತೆ ಸುಳ್ಳು ಹೇಳಲು ಸಮಾವೇಶ ಮಾಡುತ್ತಿದ್ದಾರೆ. ಸುಳ್ಳನ್ನೇ ಸತ್ಯವೆಂದು ಹೇಳಿಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ನಿವೇಶನ ವಾಪಸ್ ಮಾಡಿದ ಮುಡಾ ಹಗರಣ, ಹಣ ಅವ್ಯವಹಾರ ಆದುದನ್ನು ಸ್ವತಃ ಸಿಎಂ ಒಪ್ಪಿಕೊಂಡ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಮಾತನಾಡುತ್ತಿಲ್ಲ. ಅಧಿಕಾರಿಗಳ ಆತ್ಮಹತ್ಯೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಪ್ರತಿಯೊಂದರಲ್ಲೂ ಕಮಿಷನ್, ಹಗಲುದರೋಡೆ ವಿಚಾರ ಎತ್ತಿರುವ ಅವರದೇ ಪಕ್ಷದ ಶಾಸಕ ಬಿ.ಆರ್ ಪಾಟೀಲರಿಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.


