ಮಡಿಕೇರಿ:– ಮಡಿಕೇರಿ ತಾಲೂಕಿನ ಕಕ್ಕಬೆ ಗ್ರಾಮದಲ್ಲಿ 5 ಸಾವಿರ ಚಾಲೆಂಜ್ ಮಾಡಿ ನದಿಗೆ ಹಾರಿದ್ದ ಯುವಕನ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಶನಿವಾರ ಕೆಲ ಯುವಕರು ನದಿಗೆ ಹಾರಿ ಇಂತಿಷ್ಟು ಸಮಯದಲ್ಲಿ ದಡ ಸೇರಿದರೆ 5,000 ರೂ. ಹಾಗೂ ಶೂ ಕೊಡಿಸುವುದಾಗಿ ಸವಾಲು ಹಾಕಿದ್ದರು. ಯುವಕನನ್ನು ಕುಂಜಿಲ ಗ್ರಾಮದ ಎಂ.ಎನ್. ಸಲ್ಮಾನ್ ಎಂದು ಗುರುತಿಸಲಾಗಿದ್ದು, ಇದನ್ನೇ ಗಮನಿಸಿ ಸ್ನೇಹಿತರ ಸವಾಲು ಸ್ವೀಕರಿಸಿ, ಉಕ್ಕಿ ಹರಿಯುತ್ತಿದ್ದ ನದಿಗೆ ಹಾರಿ ದಡ ಸೇರಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ನದಿಗೆ ಹಾರಿದ ಹಿನ್ನೆಲೆ ಯುವಕನ ವಿರುದ್ಧ ಬಿಎನ್ಎಸ್ 2023ರ ಸೆಕ್ಷನ್ 125 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



