ವಿಜಯಸಾಕ್ಷಿ ಸುದ್ದಿ, ಗದಗ: ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಒಂದು ವಿಶಿಷ್ಟ ಗುರುತಿನ ಚೀಟಿಯಾಗಿದೆ. ಆಧಾರ್ ಕಾರ್ಡ್ ವ್ಯಕ್ತಿಯ ಗುರುತಿನ ಮತ್ತು ವಿಳಾಸದ ಪುರಾವೆಯಾಗಿದ್ದು, ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಸಹಾಯಧನಗಳನ್ನು ಪಡೆಯಲು ಆಧಾರ್ ಕಾರ್ಡ್ ಸಹಾಯವಾಗುತ್ತದೆ. ಸಾರ್ವಜನಿಕರ ಆಧಾರ್ ಕಾರ್ಡ್ಗಳಿಗೆ ಮೊಬೈಲ್ ಸಂಖ್ಯೆ ಲಿಂಕ್ ಅವಶ್ಯಕವಾಗಿದ್ದು, ಆಧಾರ ಕೇಂದ್ರಕ್ಕೆ ಆಗಮಿಸಿ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಆಧಾರ್ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಆಧಾರ್ ನೋಂದಣಿ ಶಿಬಿರವನ್ನು ಏರ್ಪಡಿಸಿ ಪ್ರತಿಯೊಂದು ಮಗುವು ಆಧಾರ್ ಕಾರ್ಡ್ ಗಳನ್ನು ಹೊಂದುವಂತಾಗಬೇಕು. ಆಧಾರ್ ನೋಂದಣಿಯಾದ ಶಾಲಾ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ನ್ನು ಮಾಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಸನಾಯಕ, ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ ಎಂ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ, ಅಂಚೆ ಇಲಾಖೆ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕರಾದ ಮೊಹಮ್ಮದ ಮುಸಾಬ ಮಾತನಾಡಿ, ಜಿಲ್ಲೆಯಲ್ಲಿ 12,35,602 ಆಧಾರ್ ಕಾರ್ಡ್ ಜನರೇಟ್ ಮಾಡಲಾಗಿದೆ. 11,57,749 ಆಧಾರ್ ಕಾರ್ಡ್ಗಳಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲಾಗಿದ್ದು, 77,853 ಲಿಂಕ್ ಬಾಕಿ ಇವೆ. ಜಿಲ್ಲೆಯ 1,83,735 ವಿದ್ಯಾರ್ಥಿಗಳ ಪೈಕಿ 1,40,509 ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಪರಿಶೀಲನೆಗೆ ಕಳುಹಿಸಿದ್ದು, ಆ ಪೈಕಿ 1,01,085 ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಪೂರ್ಣಗೊಂಡಿವೆ. 82,650 ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಪರಿಶೀಲನೆ ಬಾಕಿ ಇದೆ ಎಂದು ಸಭೆಗೆ ತಿಳಿಸಿದರು.