ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಹಿಳೆಯರು ಜೀವನದಲ್ಲಿ ಏನೇ ಬಂದರೂ ಹೆದರುವುದಿಲ್ಲ. ಅವರು ಎಲ್ಲವನ್ನೂ ಗಟ್ಟಿಯಾಗಿ ಎದುರಿಸಿ ನಿಲ್ಲುತ್ತಾರೆ. ಅವರಲ್ಲಿ ಆತ್ಮಬಲ ಹೆಚ್ಚಿದೆ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹೇಳಿದರು.
ಪಟ್ಟಣದ ಹಿರೇಮಠದ ಸಭಾಭವನದಲ್ಲಿ ನಡೆದ ರೋಣದ ಬಸಮ್ಮನವರು ಪಾಟೀಲರ 21ನೇ ಪುಣ್ಯಸ್ಮರಣೋತ್ಸವದ ಮಹಿಳಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮನೆಯನ್ನು ನಡೆಸುವ ಗುರುತರ ಜವಾಬ್ದಾರಿ ಮಹಿಳೆಯ ಮೇಲಿದೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನೆರವೇರಿಸಿ ಯಶಸ್ವಿಯಾದವರು ಬಸಮ್ಮ ತಾಯಿಯವರು. ಅವರು ತಮ್ಮ ಮಕ್ಕಳಿಗೆಲ್ಲರಿಗೂ ಉತ್ತಮ ಸಂಸ್ಕಾರ ಮತ್ತು ಶಿಕ್ಷಣ ನೀಡಿದ್ದರಿಂದ ಅವರು ಈ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳಾಗಿದ್ದಾರೆ. ಇದು ನಮ್ಮೆಲ್ಲ ತಾಯಂದಿರಿಗೆ ಮಾದರಿಯಾಗಬೇಕು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಅಬ್ಬಿಗೇರಿ ಹಿರೇಮಠದ ಷ. ಬ್ರ. ಶ್ರೀ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಒಬ್ಬ ಸಮರ್ಥ ತಾಯಿ ಹೇಗಿರಬೇಕು ಎಂಬುದಕ್ಕೆ ಬಸಮ್ಮ ತಾಯಿಯವರು ಉದಾಹರಣೆಯಾಗಿದ್ದಾರೆ. ಮನೆಗೆ ಬಂದ ಯಾರನ್ನೇ ಆಗಲಿ ಬರಿಗೈಯಲ್ಲಿ, ಬರಿ ಹೊಟ್ಟೆಯಲ್ಲಿ ಕಳಿಸಿದ ಉದಾಹರಣೆಗಳೇ ಇಲ್ಲ. ಒಂದು ಕುಟುಂಬದಲ್ಲಿನ ಸಂಸ್ಕೃತಿ ಹೇಗಿರಬೇಕು ಎಂಬುದನ್ನು ಪಾಟೀಲರ ಮನೆತನ ನೋಡಿಯೇ ಕಲಿಯಬೇಕು. ಕೇವಲ ರೋಣಕ್ಕಷ್ಟೆ ಸೀಮಿತಗೊಳಿಸದೆ ಪರ ಊರಿನಲ್ಲಿಯೂ ಇಂತಹ ಕಾರ್ಯಗಳನ್ನು ಮಾಡುವ ಮೂಲಕ ಪಾಟೀಲರ ಕುಟುಂಬ ಇತರರಿಗೆ ಮಾದರಿಯಾಗಿದೆ ಎಂದರು.
ಬಸಮ್ಮ ಲಕ್ಕನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಅನ್ನಪೂರ್ಣಮ್ಮ ಜಿ.ಪಾಟೀಲ ಮಾತನಾಡಿದರು. ವೇದಿಕೆಯ ಮೇಲೆ ಮಂಜುಳಾ ರೇವಡಿ, ಪಿಎಸ್ಐ ಐಶ್ವರ್ಯ ನಾಗರಾಳ, ಬಸಮ್ಮ ಪಾಟೀಲ, ರೇಣುಕಾ ಧರ್ಮಾಯತ, ಬಸಿರಾಬಾನು ನದಾಫ್, ಮಂಜುಳಾ ಹುಲ್ಲಮ್ಮನವರ, ಡಾ. ಶಶಿಕಲಾ ಅಂಗಡಿ, ಶಶಿಕಲಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ರತ್ನಮ್ಮ ದಢೇಸೂರಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಸ್ತೂರಿ ಧನ್ನೂರ ಸ್ವಾಗತಿಸಿದರು. ಗೀತಾ ಭೋಪಳಾಪೂರ ಪ್ರಾರ್ಥಿಸಿದರು. ಭಾರತಿ ಶಿರ್ಸಿ, ಮಂಜುಳಾ ಪಾಟೀಲ ಮತ್ತು ನಿರ್ಮಲಾ ಹಿರೇಮಠ ನಿರ್ವಹಿಸಿದರು. ಶಾಸಕ ಜಿ.ಎಸ್. ಪಾಟೀಲ ಕುಟುಂಬದ ಸದಸ್ಯರು, ಕಾರ್ಯಕರ್ತರು, ಮಹಿಳೆಯರು ಪಾಲ್ಗೊಂಡಿದ್ದರು.
ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿ, ಬಸಮ್ಮ ತಾಯಿಯವರು ಎಲ್ಲರ ಹೃದಯದಲ್ಲಿದ್ದಾರೆ. ತಮ್ಮ ಮಕ್ಕಳನ್ನು ಈ ನಾಡಿನ ಆಸ್ತಿಯನ್ನಾಗಿಸಿದ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಅಂದಿನ ಕಾಲದಲ್ಲಿಯೇ ರೋಣದಲ್ಲಿ ಅಕ್ಕ ಮಹಾದೇವಿ ಮಂಡಳವನ್ನು ಹುಟ್ಟು ಹಾಕಿ ಆ ಮೂಲಕ ಮಹಿಳೆಯರ ಶಿಕ್ಷಣ ಮತ್ತು ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟವರು ಮಾತೋಶ್ರೀ ಬಸಮ್ಮನವರು. ಸಾವಿತ್ರಿಬಾಯಿ ಫುಲೆ ಮಾಡಿದ ಕಾರ್ಯವನ್ನು ಗ್ರಾಮೀಣ ಭಾಗದಲ್ಲಿ ಬಸಮ್ಮ ತಾಯಿಯವರು ಮಾಡಿದ್ದಾರೆ. ಸಮಾಜಕ್ಕೆ ಬಸಮ್ಮ ತಾಯಿಯವರ ಕೊಡುಗೆ ಎಂದಿಗೂ ಅಮೂಲ್ಯ ಎಂದರು.