ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ನಿಡಗುಂದಿಕೊಪ್ಪ ಗ್ರಾಮದಲ್ಲಿ ಗ್ರಾಮ ಗ್ರಂಥಾಲಯವನ್ನು ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿ, ಗ್ರಂಥಗಳು ಮನುಷ್ಯನ ಜೀವನಾಡಿ ಇದ್ದಂತೆ. ಹೊಟ್ಟೆಗೆ ಅನ್ನ ಹೇಗೆ ಮುಖ್ಯವೋ, ತಲೆಗೆ ಜ್ಞಾನವೂ ಅಷ್ಟೇ ಮುಖ್ಯ. ಆದ್ದರಿಂದ ಪ್ರತಿ ಗ್ರಾಮದಲ್ಲಿಯೂ ಒಂದು ಗ್ರಂಥಾಲಯ ಇರುವುದು ಅವಶ್ಯಕವಾಗಿದೆ. ಗ್ರಾಮಸ್ಥರು, ಯುವಕರು ಈ ಗ್ರಂಥಾಲಯದ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದರು.
ಕೋಟುಮಚಗಿಯ ಗ್ರಂಥ ಪಾಲಕ ಸುರೇಶ ಪತ್ತಾರ ವಿಶೇಷ ಉಪನ್ಯಾಸ ನೀಡಿ, ಗ್ರಂಥಗಳು ಮನುಷ್ಯನ ಉತ್ತಮ ಸಂಗಾತಿಗಳು. ಗ್ರಂಥಗಳನ್ನು ಓದುವದರಿಂದ ನೊಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಸದಭಿರುಚಿಯ ಸಾಹಿತ್ಯ ಓದಿದರೆ ಮನುಷ್ಯ ಪರಿಪೂರ್ಣನಾಗುತ್ತಾನೆ. ಗ್ರಂಥಗಳೇ ಇಲ್ಲದಿದ್ದರೆ ದೇವರು ಮೂಕನಾಗುತ್ತಾನೆ, ನ್ಯಾಯ ದೇವತೆ ನಿದ್ರಿಸುತ್ತಾಳೆ, ವಿಜ್ಞಾನ ವಿಶ್ರಾಂತಿ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಸರ್ವಿ ಮಾತನಾಡಿದರು. ನಿಡಗುಂದಿ ಗ್ರಾ.ಪಂ ಅಧ್ಯಕ್ಷೆ ಗೀತಾ ಕುಕನೂರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಮಾಜಿ ಸದಸ್ಯ ಅಂದಪ್ಪ ಬಿಚ್ಚೂರ, ಸದಸ್ಯರುಗಳಾದ ಹನುಮಂತಪ್ಪ ಸೂಡಿ, ಸಂಗಮೇಶ ಅಬ್ಬಿಗೇರಿ, ಶಿವಣ್ಣ ಸೂಡಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ಅಮರೇಶ ಮೂಲಿಮನಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.