ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಹಿತ್ಯ ಕ್ಷೇತ್ರ ನಿಂತ ನೀರಲ್ಲ. ಅದು ಸದಾ ಪ್ರವಹಿಸುತ್ತಿರುತ್ತದೆ. ಅದಕ್ಕೆ ಹೊಸ ಓದುಗರು, ಬರಹಗಾರರು ಬಂದು ಸೇರಿಕೊಂಡು ಸಾಹಿತ್ಯ ಕ್ಷೇತ್ರದ ವಿಸ್ತಾರ ಹೆಚ್ಚಿಸಬೇಕು ಹೂವಿನ ಶಿಗ್ಲಿಯ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಸಹಸ್ರಾರ್ಜುನ ಬಿ.ಎಡ್ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಬರಹಗಾರ ಬಳಗ ಹೂವಿನಹಡಗಲಿ, ಜಿಲ್ಲಾ ಘಟಕ ಗದಗ ಹಾಗೂ ಬರಹಗಾರ ಬಳಗ ಲಕ್ಷ್ಮೇಶ್ವರ ಘಟಕದ ಉದ್ಘಾಟನೆ, ಪದಗ್ರಹಣ ಸಮಾರಂಭ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯದ ವಿವಿಧ ಆಯಾಮಗಳು ಹೊಸ ಹೊಸ ಬರಹದ ಮೂಲಕ ಹೊರ ಬಂದಲ್ಲಿ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಲಕ್ಷೇಶ್ವರ ತಾಲೂಕಿನಲ್ಲಿ ಉದ್ಘಾಟನೆಯಾದ ಬರಹಗಾರರ ಬಳಗದಿಂದ ಸಾಹಿತ್ಯದ ವಿವಿಧ ರೀತಿಯ ಬರಹಗಳು ಹೊರಬಂದಲ್ಲಿ ಕನ್ನಡ ಸಾಹಿತ್ಯಕ್ಕೆ ಅಮೋಘ ಕೊಡುಗೆ ನೀಡಿದಂತಾಗುತ್ತದೆ. ವೇದಿಕೆಯ ಮೂಲಕ ಒಳ್ಳೆಯ ಬರಹಗಾರರು ಹೊರಬರಲಿ. ಆ ದಿಸೆಯಲ್ಲಿ ಬಳಗ ಅತ್ಯುತ್ತಮ ಕಾರ್ಯಕ್ರಮನ್ನು ಆಯೋಜಿಸಲೆಂದು ಆಶೀರ್ವದಿಸಿದರು.
ಸಹಸ್ರಾರ್ಜುನ ಬಿ.ಇಡಿ ಕಾಲೇಜಿನ ಆಡಳಿತ ಮಂಡಳಿಯ ವಸಂತ ತೊಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ ಲೇಖಕರು ಹಾಗೂ ಬರಹಗಾರರು ಹೊರಬಂದಲ್ಲಿ ಈ ವೇದಿಕೆಯ ಉದ್ದೇಶ ಈಡೇರಿದಂತಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ಸಾಹಿತ್ಯ ರಚನೆಯಲ್ಲಿ ವಿವಿಧ ಆಯಾಮಗಳು ಕುರಿತು ಉಪನ್ಯಾಸ ನೀಡಿದರು. ಗದಗ ಜಿಲ್ಲಾಧ್ಯಕ್ಷೆ ಕಲಾಶ್ರೀ ಹಾದಿಮನಿ, ಕೃಷ್ಣಾಸಾ ಖೋಡೆ, ಪ್ರಾಚಾರ್ಯ ರೇಣುಕಾನಂದ ಅಂಗಡಿ, ನಿರ್ಮಲಾ ಅರಳಿ, ರತ್ನಾ ಕರ್ಕಿ, ಎಲ್.ಎಸ್. ಅರಳಿಹಳ್ಳಿ ಇದ್ದರು. ಲಕ್ಷೇಶ್ವರ ತಾಲೂಕು ಬರಹಗಾರರ ಬಳಗದ ತಾಲೂಕಾಧ್ಯಕ್ಷ ಜೆ.ಎಸ್. ರಾಮಶೆಟ್ಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸಂಗಪ್ಪಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಶಂಕರ ಶಿಳ್ಳಿನ ವಂದಿಸಿದರು.