ವಿಜಯಸಾಕ್ಷಿ ಸುದ್ದಿ, ಡಂಬಳ: 12ನೇ ಶತಮಾನದ ಕಾಂತ್ರಿಯಲ್ಲಿ ಕಾಯಕ, ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದ ಶರಣ ನುಲಿಯ ಚಂದಯ್ಯನವರು ಬಸವಣ್ಣನವರ ಅನುಭವ ಮಂಟಪದಲ್ಲಿ ಜಾತಿ ರಹಿತ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಕಲ್ಪನೆ ಸಾಕಾರಕ್ಕೆ ಅವರ ಪಾತ್ರ ಮುಖ್ಯವಾಗಿತ್ತು ಎಂದು ಪರಿಸರವಾದಿ ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು.
ಡಂಬಳ ಗ್ರಾಮದ ಕೊರಚ ಬಡಾವಣೆಯಲ್ಲಿ ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಬೆಂಗಳೂರು ಮತ್ತು ಡಂಬಳ ಕೊರಚ ಸಮಾಜದ ಸಂಯುಕ್ತ ಆಶ್ರಯದಲ್ಲಿ ಶ್ರೀ ನುಲಿಯ ಚಂದಯ್ಯ ಜಯಂತ್ಯುತ್ಸವ ಹಾಗೂ ನೂತನ ಅಖಿಲ ಕರ್ನಾಟಕ ಕೊರಚ ಮಹಾಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವ ಶರಣ ನುಲಿಯ ಚಂದಯ್ಯ ಸಮ-ಸಮಾಜದ ನಿರ್ಮಾಣ ಮಾಡಲು ಸಾಮಾಜಿಕ ಪಿಡುಗು ಹಾಗೂ ಮೂಢನಂಬಿಕೆ ವಿರುದ್ಧ ಜನರಿಗೆ ಅರಿವು ಮೂಡಿಸಿದ ಶ್ರೇಷ್ಠ ವಚನಕಾರರು. ಗ್ರಾಮದಲ್ಲಿರುವ ಕೊರಚ ಸಮಾಜದ ಮಹಿಳೆಯರು, ಪುರುಷರು ಕಾಯಕದಲ್ಲಿ ತೊಡಗಿರುವವರಾಗಿದ್ದೀರಿ ಎಂದು ಹೇಳಿದರು.
ಗ್ರಾ.ಪಂ ಸದಸ್ಯ ಮರಿಯಪ್ಪ ಸಿದ್ದಣ್ಣವರ, ಪತ್ರಕರ್ತ ಲಕ್ಷ್ಮಣ ದೊಡ್ಡಮನಿ ಮಾತನಾಡಿ, ಕೊರಚ ಸಮಾಜ ಪ್ರತಿಯೊಂದು ರಂಗದಲ್ಲಿಯೂ ಹಿಂದೆಯೇ ಉಳಿದಿರುವ ಸಮಾಜವಾಗಿದ್ದು, ನಿಮ್ಮ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟನಾತ್ಮಕವಾಗಿ ತೋಡಗಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದರು.
ಸಿಐಟಿಯು ಅಧ್ಯಕ್ಷೆ ಸುಶೀಲಾ ಚಲವಾದಿ, ಹುಸೇನಮ್ಮ ಕೊಪ್ಪಳ ಮಾತನಾಡಿ, ಕಾಯಕ ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದ ಶರಣರು ನುಲಿಯ ಚಂದಯ್ಯನವರು ಎಂದರು. ಶ್ರೀ ನುಲಿಯ ಚಂದಯ್ಯ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರದ ಮೆರವಣಿಗೆಯು ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಎ.ಎಸ್.ಐ ಎನ್.ಡಿ. ತಹಸೀಲ್ದಾರ, ಪತ್ರಕರ್ತ ರಿಯಾಜ ದೊಡ್ಡಮನಿ, ಮೈಲಾರಪ್ಪ ಕೊರಚ, ಶಿವಪ್ಪ ಕೊರಚ, ದೊಡ್ಡಹನಮಪ್ಪ ಕೊರಚ, ಸಣ್ಣಮಾರಗೆಪ್ಪ ಕೊರಚ, ಹನಮಪ್ಪ ಕೊರಚ, ಗಂಗಪ್ಪ ಕೊರಚ, ಹನುಮಂತ ಕೊರಚ, ಶಿವಪ್ಪ, ಮಲಕಪ್ಪ ಕೊರಚ, ಹನಮವ್ವ ಕೊರಚ, ಅಧ್ಯಕ್ಷ ದ್ಯಾಮಣ್ಣ ಕೊರಚ, ಉಪಾಧ್ಯಕ್ಷ ರಾಮಪ್ಪ ಕೊರಚ, ಪ್ರಧಾನ ಕಾರ್ಯದರ್ಶಿ ದೊಡ್ಡಯಲ್ಲಪ್ಪ ಕೊರಚ, ಖಜಾಂಜಿ ಹನಮಪ್ಪ, ಮಹಿಳಾ ಅಧ್ಯಕ್ಷೆ ಹನಮವ್ವ ಕೊರಚ, ಉಪಾಧ್ಯಕ್ಷೆ ಗಾಳೇವ್ವ ಕೊರಚ, ಪ್ರಧಾನ ಕಾರ್ಯದರ್ಶಿ ಕೆಂಚವ್ವ, ಖಜಾಂಚಿ ಅನಿತಾ, ಸಂಘಟನಾ ಕಾರ್ಯದರ್ಶಿಗಳು, ಸಮಿತಿಯ ಸರ್ವ ಸದಸ್ಯರು ಇದ್ದರು.
ಮೃಂಜಯ್ಯ ಹಿರೇಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಆರ್.ಜಿ. ಕೊರ್ಲಹಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೊರಚ ಮಹಾ ಸಂಘದ ಗದಗ ಜಿಲ್ಲಾಧ್ಯಕ್ಷ ಡಿ. ಆಂಜನೇಯ ಮಾತನಾಡಿ, ಧರ್ಮ ಮತ್ತು ಕಾಯಕ ಇವೆರಡೂ ನಮ್ಮ ಕೈ ಹಿಡಿಯುತ್ತವೆ. ಶ್ರದ್ಧಾ ಮನೋಭಾವನೆಯಿಂದ ಕೆಲಸ ಮಾಡಿದರೆ ಯಶಸ್ಸು ಲಭಿಸುತ್ತದೆ. ಇದೇ ಸಂದೇಶವನ್ನು ಸಮಾಜಕ್ಕೆ ಸಾರಿದ ಕೀರ್ತಿ ನುಲಿಯ ಚಂದಯ್ಯನವರಿಗೆ ಸಲ್ಲುತ್ತದೆ. ಸರ್ಕಾರಿ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಲು ಮುಂದಾಗಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶ್ರೀ ನುಲಿಯ ಚಂದಯ್ಯ ಅವರ ತತ್ವ- ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.