ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂಧ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಸವರಾಜ ಬೊಮ್ಮನಳ್ಳಿಯರಿಗೆ ರಕ್ಷೆ ಕಟ್ಟುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ದೈವ ಸ್ವರೂಪಿಗಳಾಗಿರುವ, ಏನೂ ಅರಿಯದ ಇಂತಹ ಮಕ್ಕಳ ನಡೆ-ನುಡಿಗಳನ್ನು ತಿದ್ದುವ ಕಾರ್ಯ ಮಾಡುತ್ತಿರುವ ಇಲ್ಲಿನ ಶಿಕ್ಷಕರ ಕಾರ್ಯ ಅಪರೂಪದ್ದಾಗಿದೆ. ಎಲ್ಲ ಅಂಗಗಳೂ ಸರಿಯಾಗಿರುವ ಮಕ್ಕಳನ್ನು ತಿದ್ದುವುದೇ ಕಷ್ಟವಾಗಿರುವಾಗ ವಿಶೇಷ ಅಗತ್ಯತೆಯುಳ್ಳ ಬುದ್ಧಿಮಾಂಧ್ಯ ಮಕ್ಕಳಿಗೆ ಸೇವೆಯ ರೂಪದಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವಾ ಮನೋಭಾವನೆಯ ಶಾಲೆಗೆ ಆರೋಗ್ಯ ಇಲಾಖೆಯಿಂದ ವಿಶೇಷ ಮಕ್ಕಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯೋಪಾಧ್ಯಾಯೆ ನೀಲಮ್ಮ ದಾಸಪ್ಪನವರ ವಹಿಸಿದ್ದರು. ಸೋಮಶೇಖರ ಕೆರಿಮನಿ, ಶಿವಶಂಕರ ಬ್ಯಾಡಗಿ ಮಾತನಾಡಿ, ನಮ್ಮ ಲಕ್ಷೆö್ಮÃಶ್ವರದವರಾಗಿ ಉನ್ನತ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಬಸವರಾಜ ಬೊಮ್ಮನಹಳ್ಳಿ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಇವರ ಸಮಾಜಮುಖಿ ನಡೆ-ನುಡಿಗಳು ಅವರ ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ ಎಂದರು.
ಮುಖ್ಯ ಅಥಿತಿಗಳಾಗಿ ಚನ್ನಪ್ಪ ಷಣ್ಮುಖಿ, ಹೊನ್ನಪ್ಪ ವಡ್ಡರ, ಮುತ್ತಪ್ಪ ಪೂಜಾರ, ಈಶ್ವರ ಮೆಡ್ಲೇರಿ, ಎಂ.ಕೆ. ಕಳ್ಳಿಮಠ, ಎಂ.ಬಿ. ಹೊಸಮನಿ, ಪಾರ್ವತಿ ಕಳ್ಳಿಮಠ, ವರ್ಷಾ ಬ್ಯಾಡಗಿ ಪಾಲ್ಗೊಂಡಿದ್ದರು. ಅಕ್ಕಮ್ಮ ನಿರೂಪಿಸಿದರು. ವಿಶೇಷ ಶಿಕ್ಷಕರಾದ ಲಲಿತಾ, ನೇತ್ರಾ, ರಾಜೇಶ್ವರಿ, ಪ್ರಶಾಂತ, ಹೇಮಾ, ಅಮೃತ ಮತ್ತಿತರರು ಹಾಜರಿದ್ದರು.