ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಅಖಂಡತೆಗೆ ಧಕ್ಕೆ ತರುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯಾತ್ನಾಳರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಶಾಸಕರಾದ ಮೇಲೆ ವಿಧಿವತ್ತಾಗಿ ವಿಧಾನಸಭೆಯಲ್ಲಿ ಭಾಗವಹಿಸಲು ಪ್ರತಿಜ್ಞಾ ವಿಧಿ ಸ್ವೀಕರಿಸಿ ಪ್ರಜೆಗಳ ದುಡ್ಡಿನಲ್ಲಿ ಮೆರೆಯುತ್ತಿರುವ ಶಾಸಕ ಸ್ಥಾನಕ್ಕೆ ಅಪವಾದವಾಗಿದ್ದಾರೆ ಎಂದು ಗದಗ ಶಹರ ಕಾಂಗ್ರೆಸ್ ಕಮಿಟಿ ಗದಗ ಶಹರ ಉಪಾಧ್ಯಕ್ಷ ಎಂ.ಎನ್. ಶಾಲಗಾರ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೂಟಾಟಿಕೆ ಮತ್ತು ಸಮಾಜದಲ್ಲಿ ಅಶಾಂತಿ, ಕೋಮುಗಲಭೆ ಮತ್ತು ಸಾಮಾಜಿಕ ವಾತಾವರಣವನ್ನು ಹದಗೆಡಿಸುವ ಮಾತುಗಳನ್ನೇ ಆಡುತ್ತಾರೆ.
ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿ, ಮುಸ್ಲಿಂ ಹುಡುಗಿಯನ್ನು ಹಿಂದೂ ಹುಡುಗ ಮದುವೆಯಾದರೆ 5 ಲಕ್ಷ ರೂ ಕೊಡುತ್ತೇನೆ ಎಂದು ಹೇಳಿರುವ ಮಾತು ಮುಸ್ಲಿಂ ಧರ್ಮದ ಎಲ್ಲರ ಭಾವನೆಗೆ ಧಕ್ಕೆ ತಂದಿದೆ. ಸರಕಾರ ಈಗಾಗಲೇ ತಪ್ಪು ಮಾಡಿದವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸುತ್ತಿದೆ. ಸೌಹಾರ್ದತೆಯ ವಾತಾವರಣಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಈ ಕೂಡಲೇ ರಾಜೀನಾಮೆ ನೀಡಿ ವಿಧಾನಸಭೆಯಿಂದ ನಿರ್ಗಮಿಸಬೇಕೆಂದು ಅವರು ಆಗ್ರಹಿಸಿದ್ದಾರೆ.


