ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಶಿರಹಟ್ಟಿ, ಶರಣ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಬೆಳ್ಳಟ್ಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಸಂಭ್ರಮ ಹಾಗೂ ಡಾ. ಎಸ್.ಎಫ್. ಹಿರೇಮಠ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಷ.ಬ್ರ.ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗೈಕ್ಯ ಶ್ರೀ ಡಾ. ಎಸ್.ಎಫ್. ಹಿರೇಮಠ ಅವರ ಸ್ಮರಣಾರ್ಥ ಕನ್ನಡ ಸಾಹಿತ್ಯ ಪರಿಷತ್ತಿಗೆ 25 ಸಾವಿರ ರೂಪಾಯಿಗಳ ದತ್ತಿ ನಿಧಿ ಕೊಡಮಾಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಡಾ. ಎಸ್.ಎಫ್. ಹಿರೇಮಠ ಅವರ ಬದುಕು ಆದರ್ಶಪ್ರಾಯವಾದುದು. ವೃತ್ತಿಯಿಂದ ಶಿಕ್ಷಕರಾಗಿ, ನಂತರ ವೈದ್ಯರಾಗಿ ಅವರು ಸಲ್ಲಿಸಿದ ಸೇವೆ ಅಮೋಘವಾದದ್ದು. ಅವರು ಬೆಳ್ಳಟ್ಟಿ, ಬನ್ನಿಕೊಪ್ಪ ಹಾಗೂ ಗದಗ ನಗರದಲ್ಲಿ ಶೈಕ್ಷಣಿಕವಾಗಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದರು. ಅವರು ವೈದ್ಯಕೀಯ ಕ್ಷೇತ್ರದಲ್ಲಿ ನಿಷ್ಠೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು. ಅವರ ಸೇವೆ ನಿಷ್ಕಲ್ಮಶವಾಗಿತ್ತು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಉಪನ್ಯಾಸಕ ಎಸ್.ಯು. ಸಜ್ಜನಶೆಟ್ಟರ, ಎಮ್.ಸಿ. ಮರಡೂರಮಠ, ನವೀನ ಕುಮಾರ ಅಳವಂಡಿ, ಗಿರೀಶ ಕೋಡಬಾಳ, ಎಂ.ಬಿ. ಹಾವೇರಿ, ಮಲ್ಲಿಕಾರ್ಜುನ್ ರೆಡ್ಡಿ ಹುಲ್ಲೂರ, ಕಿಶೋರಬಾಬು ನಾಗರಕಟ್ಟಿ, ನಿಂಗನಗೌಡ ಪಾಟೀಲ್, ವಿ.ಜಿ. ಅಂಗಡಿ, ಸುರೇಶ್ ಮೇಕಳಿ, ಆರ್.ಟಿ. ಕಬ್ಬಿಣ, ಸುರೇಶ್ ಬೆಲಹುಣಸಿ, ಎಸ್.ಎಸ್. ನಾವಿ, ಎಸ್.ಎನ್. ಮೇಟಿ, ಬನ್ನಿಕೊಪ್ಪ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಮತ್ತು ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.