ತಮಿಳು ಚಿತ್ರರಂಗದ ಖ್ಯಾತ ನಟ, ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ನಾಳೆ ಮಧುರೈನಲ್ಲಿ ತಮ್ಮ ಪಕ್ಷದ ಎರಡನೇ ರಾಜ್ಯ ಸಮಾವೇಶ ನಡೆಸಲಿದ್ದಾರೆ. ಹೀಗಾಗಿ ವಿಜಯ್ ಎರಡು ದಿನಗಳ ಹಿಂದೆ ಮಧುರೈಗೆ ರಹಸ್ಯವಾಗಿ ಆಗಮಿಸಿದ್ದಾರೆ ಎಂಬ ವರದಿಯಿದೆ. ಸಮಾವೇಶದಲ್ಲಿ ರೋಡ್ ಶೋ ನಡೆಸದಂತೆ ಪೊಲೀಸರು ವಿಜಯ್ ಗೆ ಸೂಚನೆ ನೀಡಿದ್ದಾರೆ. ಈ ಮಧ್ಯೆ ವೇದಿಕೆ ಮುಂಭಾಗದಲ್ಲಿ ಹಾಕಿದ್ದ 100 ಅಡಿ ಧ್ವಜಸ್ತಂಭ ಮುರಿದು ಬಿದ್ದು ಅವಘಡ ಸಂಭವಿಸಿದೆ.
ಮಧುರೈನಲ್ಲಿರುವ ಟಿವಿಕೆ ಸಮ್ಮೇಳನ ಸ್ಥಳದಲ್ಲಿ ನೂರು ಅಡಿ ಧ್ವಜಸ್ತಂಭವೊಂದನ್ನು ಹಾಕಲಾಗಿದ್ದು ಇದೀಗ ಅದು ನೆಲಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಕಂಬ ಬಿದ್ದು ದೊಡ್ಡ ಹಾನಿಯಾಗಿದೆ.
ಬರೋಬ್ಬರಿ 10 ಟನ್ ತೂಕದ ಕಂಬಿಣದ ಕಂಬ ಬಿದ್ದಿದ್ದು ಕೂದಲೆಳೆ ಅಂತರದಲ್ಲಿ ಅಲ್ಲಿದ್ದವರು ಬಚಾವಾಗಿದ್ದಾರೆ. ತಕ್ಷಣವೇ ಎಚ್ಚೆತ್ತ ಕಾರ್ಮಿಕರು ಅಲ್ಲಿದ್ದವರನ್ನು ದೂರ ಕಳುಹಿಸಿ ಧ್ವಜಸ್ತಂಭವನ್ನು ತೆರವು ಮಾಡಿದ್ದಾರೆ.