ವಿಜಯಸಾಕ್ಷಿ ಸುದ್ದಿ, ಗದಗ
ಕೋವಿಡ್-19 ಸೋಂಕು ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿದ ಕಠಿಣ ಮಾರ್ಗಸೂಚಿಗಳನ್ನು ಸಡಿಲು ಮಾಡಿ ಜೂ.19 ರಂದು ಆದೇಶ ಹೊರಡಿಸಿರುತ್ತದೆ. ಈ ಮಾರ್ಗಸೂಚಿಗಳು ಜೂನ್ 21 ರ ಬೆಳಿಗ್ಗೆ 6 ಗಂಟೆಯಿಂದ ಜುಲೈ 5 ರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿವೆ.
ವಾರಾಂತ್ಯ ಕರ್ಫ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 6 ಗಂಟೆಯರೆಗೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಯಾವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ ನಿರ್ಬಂಧಿಸಲಾಗಿದೆ ಎಂಬ ಮಾಹಿತಿಯು ಈ ಕೆಳಕಂಡಂತಿದ್ದು, ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಗದಗ ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಲಾಗಿದೆ. ಅದೇ ರೀತಿ ಆಹಾರ ಪದಾರ್ಥ, ದಿನಸಿ, ತರಕಾರಿ, ಹಣ್ಣು ಮಾಂಸ ಮೀನು, ಹಾಲು ಡೈರಿ ಉತ್ಪನ್ನ, ಅಗತ್ಯ ವಸ್ತು, ಮದ್ಯ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ನಿಗಧಿಯಾದ ಮದುವೆ ಕಾರ್ಯಕ್ರಮಗಳಿಗೆ 40 ಜನ ಭಾಗವಹಿಸಲು ಸಮ್ಮತಿ ನೀಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ 5 ಜನ ಪಾಲ್ಗೊಳ್ಳಲು ಅವಕಾಶವಿದೆ.
ಇನ್ನುಳಿದಂತೆ ಸರ್ಕಾರಿ ನೌಕರರು ಅಗತ್ಯ ಸೇವೆಗೆ ನಿಯೋಜಿತರಿಗೆ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಕಾರ್ಯನಿರ್ವಹಣೆಗೆ ಅವಕಾಶ ನೀಡಿದೆ. ಸಾರ್ವಜನಿಕರು ಅನಾರೋಗ್ಯವಾದಲ್ಲಿ ಆಸ್ಪತ್ರೆಗಳಿಗೆ ತೆರಳಲು, ಹಾಗೂ ಲಸಿಕೆ ಹಾಕಿಸಿಕೊಳ್ಳುವದಕ್ಕಾಗಿ ತೆರಳಲು ಅವಕಾಶ ನೀಡಲಾಗಿದೆ.
ಈ ವೇಳೆ ರೋಗಿಗಳು ಅವರ ಸಹಾಯಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ ಕಾರ್ಯಾಚರಣೆ ಅಗತ್ಯವಿರುವ ಕೈಗಾರಿಕೆಗಳಿಗೆ ಅವಕಾಶವಿರುತ್ತದೆ, ನೌಕರರು ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಬೇಕು. ಒಟ್ಟಾರೆ ರಾತ್ರಿ ಕರ್ಫ್ಯೂ ಹಾಗೂ ವಿಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಅನುಮತಿಸಲಾದ ಚಟುವಟಿಕೆ ಹೊರತುಪಡಿಸಿ ಜನರ ಹಾಗೂ ವಾಹನಗಳ ಅನಗತ್ಯ ಓಡಾಟಕ್ಕೆ ನಿರ್ಭಂಧಿಸಲಾಗಿದೆ.
ಅದರಂತೆ ಟೆಲಿಕಾಂ ಇಂಟರ್ನೆಟ್ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ, ಆದರೆ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬೇಕು, ವೈದ್ಯಕೀಯ ತುರ್ತು ಸೇವೆಗಳು ಅಗತ್ಯ ಸೇವೆಗಳಾದ ಫಾರ್ಮಸಿಗಳ ಕಾರ್ಯಾಚರಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ, ಎಲ್ಲಾ ತರಹದ ಸರಕುಗಳು ಮತ್ತು ಸರಕು ಸಾಗಾಟವಾಹನಗಳ ಸಂಚಾರಕ್ಕೆ ನಿರ್ಬಂಧ ಇರುವುದಿಲ್ಲ, ಸರಕುಗಳ ಹೋಂ ಡೆಲಿವರಿ, ಇ-ಕಾಮರ್ಸ್ ಚಟುವಟಿಕೆಗಳಿಗೆ ಸರಕಾರದ ಮಾರ್ಗಸೂಚಿ ಅನ್ವಯ ಅವಕಾಶ ಇರುತ್ತದೆ. ರೈಲು ವಿಮಾನ ಸೇವೆ ಎಂದಿನಂತೆ ಅವಕಾಶವಿದ್ದು ಟಿಕೆಟ್ ಅನ್ನು ಪಾಸ್ ರೀತಿಯಲ್ಲಿ ಬಳಸಲು ಸೂಚಿಸಲಾಗಿದೆ.
ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಬರದೇ ಮನೆಯಲ್ಲೇ ಇರುವ ಮೂಲಕ ಸೋಂಕು ನಿಯಂತ್ರಣದಲ್ಲಿ ಸಹಕರಿಸಬೇಕು. ಅಗತ್ಯ ಸಂದರ್ಭದಲ್ಲಿ ಮನೆಯಿಂದ ಹೊರಬಂದಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.