ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೆ. 11ರಂದು ಉಚಿತ ಕಣ್ಣಿನ ಪೊರೆಯ ಚಿಕಿತ್ಸೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ನೇತ್ರಾಧಿಕಾರಿ ಮಂಜುನಾಥ ದೊಡ್ಡಮನಿ ಹೇಳಿದರು.
ಪಟ್ಟಣದ ನಮ್ಮ ಕ್ಲಿನಿಕ್ನಲ್ಲಿ ಉಚಿತ ಕಣ್ಣಿನ ಪೊರೆಯ ಚಿಕಿತ್ಸೆ ಅಭಿಯಾನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಎಂದರೆ ಕಣ್ಣಿನ ಮಸೂರವನ್ನು ತೆಗೆದುಹಾಕಿ ಅದರ ಬದಲಿಗೆ ಕೃತಕ ಮಸೂರವನ್ನು ಅಳವಡಿಸುವ ಒಂದು ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಈ ಶಸ್ತ್ರಚಿಕಿತ್ಸೆಯಿಂದ ದೃಷ್ಟಿಯನ್ನು ಸುಧಾರಿಸಬಹುದು ಮತ್ತು ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದು. ಲೇಸರ್ ಬಳಸಿ ಕಣ್ಣಿನ ಪೊರೆಗೆ ನಿಖರವಾದ ಕಡಿತಗಳನ್ನು ಮಾಡಲಾಗುತ್ತದೆ ಮತ್ತು ಮಸೂರವನ್ನು ಒಡೆಯಲಾಗುತ್ತದೆ. ಶಸ್ತ್ರಚಿಕಿತ್ಸೆಯ ನಂತರ, ಕಣ್ಣುಗಳಿಗೆ ವಿಶ್ರಾಂತಿ ನೀಡುವುದು ಮುಖ್ಯ. ವೈದ್ಯರ ಸಲಹೆಯಂತೆ ಕಣ್ಣಿನ ಹನಿಗಳನ್ನು ಬಳಸಿ ಮತ್ತು ಸೂಚಿಸಿದಂತೆ ಕಣ್ಣಿನ ಆರೈಕೆಯನ್ನು ನೋಡಿಕೊಳ್ಳಿ. ಶಸ್ತ್ರಚಿಕಿತ್ಸೆಯ ನಂತರ ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಚ್. ಜಾಲಿಹಾಳ, ರೇಷ್ಮಾ ಓಲೆಕಾರ, ಚಂದ್ರು ಗಂಗರಗೊಂಡ, ಸಂಗೀತಾ ಮುಚಖಂಡಿ, ವಿಜಯಲಕ್ಷ್ಮೀ ಪೊಲೀಸ್ಪಾಟೀಲ, ಕೆ.ಎ. ಬುದಿಹಾಳ, ಎಲ್.ಟಿ. ಹೊಸಮನಿ ಮುಂತಾದವರಿದ್ದರು.