ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಕೊತ್ತಲವಾಡಿ ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಪುಷ್ಪ ಸಿನಿಮಾಗಿಂತ ಹೆಚ್ಚಾಗಿ ತಮ್ಮ ಹೇಳಿಕೆಗಳ ಮೂಲಕವೇ ಸದ್ದು ಮಾಡ್ತಿದ್ದಾರೆ. ಪುಷ್ಪ ಅವರು ನಿರ್ಮಿಸಿದ್ದ ‘ಕೊತ್ತಲವಾಡಿ’ ಸಿನಿಮಾ ಸೋತಿದೆ. ಸಿನಿಮಾ ಸೋತ ಬಳಿಕ ನೀಡಿದ ಸಂದರ್ಶನದಲ್ಲಿ ಸಿನಿಮಾ ಸೋಲಿಗೆ ಕೆಆರ್ಜಿ ಫಿಲಮ್ಸ್ನ ನಿರ್ಮಾಪಕ ಕಾರ್ತಿಕ್ ಗೌಡ ಕಾರಣ ಎಂದು ದೂರಿದರು. ಅದೇ ಸಂದರ್ಶನದಲ್ಲಿ ನಟಿ, ಸಂಬಂಧಿಯೂ ಆಗಿರುವ ದೀಪಿಕಾ ದಾಸ್ ಬಗ್ಗೆ ವಿನಾಕಾರಣ ತುಚ್ಛವಾಗಿ ಮಾತನಾಡಿದರು. ಇದೀಗ ದೀಪಿಕಾ ದಾಸ್ ಸೋಷಿಯಲ್ ಮೀಡಿಯಾ ಮೂಲಕ ಪುಷ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಪುಷ್ಪ ಅವರು ದೀಪಿಕಾ ದಾಸ್ ಬಗ್ಗೆ ಮಾತನಾಡಿದ್ದಾರೆ. ‘ನಿಮ್ಮ ಮುಂದಿನ ಸಿನಿಮಾಕ್ಕೆ ದೀಪಿಕಾ ದಾಸ್ ನಾಯಕಿಯಂತೆ?’ ಎಂಬ ಪ್ರಶ್ನೆಯನ್ನು ಸಂದರ್ಶಕರು ಕೇಳಿದ್ದಾರೆ. ಇದಕ್ಕೆ ಸಿಟ್ಟಾದ ಪುಷ್ಪ ಅರುಣ್ ಕುಮಾರ್, ‘ದೀಪಿಕಾ ದಾಸ್ಗೂ ನಮಗೂ ಆಗಲ್ಲ. ಅವಳು ಯಾವ ದೊಡ್ಡ ಹೀರೊಯಿನ್ನು, ಯಾವ ಸಾಧನೆ ಮಾಡಿದ್ದಾಳೆ? ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ‘ನಮ್ಮ ಸಂಬಂಧವೇ ಆದರೂ ಅವರನ್ನು ದೂರ ಇಟ್ಟಿದ್ದೀವಿ. ಅವರ ಬಗ್ಗೆ ಯಾಕೆ ಕೇಳ್ತೀರಾ? ನನ್ನ ಮಗ ಬೈಯಲ್ವಾ? ಇನ್ನು ಬಹಳ ಹೀರೊಯಿನ್ ಇದ್ದಾರೆ, ಅವರ ಬಗ್ಗೆ ಬೇಕಾದರೆ ಕೇಳಿ. ದೀಪಿಕಾ ದಾಸ್ ಏನು ರಮ್ಯಾನಾ? ರಕ್ಷಿತಾನಾ? ಒಂದು ವೇಳೆ ದೊಡ್ಡದಾಗಿ ಸಾಧನೆ ಮಾಡಿದ್ದರೆ ಅವರ ಬಗ್ಗೆ ಕೇಳಿ ಅದು ಬಿಟ್ಟು ದೀಪಿಕಾ ದಾಸ್ ಕಥೆ ಯಾಕೆ?’ ಎಂದಿದ್ದಾರೆ.
ತಮ್ಮ ಬಗ್ಗೆ ದೊಡ್ಡಮ್ಮ ಮಾತನಾಡಿದ್ದಕ್ಕೆ ದೀಪಿಕಾ ದಾಸ್ ಗರಂ ಆಗಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದ ಮೂಲಕ ಪ್ರತಿಕ್ರಿಯಿಸಿರುವ ದೀಪಿಕಾ ದಾಸ್, ‘ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದ್ದನ್ನು ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್ ಡ್ಯೂ ರೆಸ್ಪೆಕ್ಟ್ ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದಿದ್ದರು.
ಮತ್ತೊಂದು ಪೋಸ್ಟ್ ಹಂಚಿಕೊಂಡಿರುವ ದೀಪಿಕಾ ದಾಸ್, ‘ಸತ್ಯದ ತಲೆ ಮೇಲೆ ಹೊಡೆದಂತೆ ಹೇಳುವ ಬುದ್ಧಿ. ಯಾರೂ ಎಲ್ಲೂ ಹೋಗಿಲ್ಲ. ಯಾರೂ ನಮ್ಮ ಹತ್ರ ಬರುವ ಅವಶ್ಯಕತೆಯೂ ಇಲ್ಲ. ಅನಾವಶ್ಯಕವಾಗಿ ಇಲ್ಲದ್ದನ್ನು ಮಾತನಾಡಿ ನನ್ನ ಹಾಗೂ ನನ್ನ ಕುಟುಂಬವನ್ನು ಎಳೆದು ತರಬೇಡಿ. ದೊಡ್ಡವರ ಅತಿರೇಕದ ಸಣ್ಣತನ ಇನ್ನಾದರೂ ಬೇಡ. ಇನ್ನು ಇದರ ಬಗ್ಗೆ ನನಗೆ ಇನ್ನೇನೂ ಮಾತನಾಡುವುದಿಲ್ಲ’ ಎಂದು ದೀಪಿಕಾ ದಾಸ್ ಪೋಸ್ಟ್ ಹಂಚಿಕೊಂಡಿದ್ದಾರೆ.