ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಎಪಿಎಂಸಿ ಸಭಾಭವನದಲ್ಲಿ ಗದಗ ಲೋಕಾಯುಕ್ತ ಅಧಿಕಾರಿಗಳಿಂದ ಸೋಮವಾರ ಜನಸಂಪರ್ಕ ಸಭೆ ನಡೆಯಿತು.
ಈ ಸಂದರ್ಭದಲ್ಲಿ ವಡವಿ ಗ್ರಾಮದ ರಿ.ಸ.ನಂ. 134\4, ಮತ್ತು 61\4 ನೇದ್ದವುಗಳ ಹೊಸ ಶರ್ತು ಕಡಿಮೆ ಮಾಡಲು, ಬನ್ನಿಕೊಪ್ಪ ಗ್ರಾಮದ ಸ್ಮಶಾನಕ್ಕೆ ರಸ್ತೆ ನಿರ್ಮಾಣಕ್ಕೆ, ಬೆಳೆ ವಿಮೆ ಸರಿಯಾಗಿ ರೈತರಿಗೆ ಜಮಾ ಆಗದೇ ಇರುವುದಕ್ಕೆ ಬನ್ನಿಕೊಪ್ಪ ಗ್ರಾಮದ ರೈತರಿಂದ ಅರ್ಜಿ ಮತ್ತು ಬೆಳ್ಳಟ್ಟಿ ಗ್ರಾಮದಲ್ಲಿ ಭಾರೀ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿರುವ ಬಗ್ಗೆ ಅರ್ಜಿಗಳು ಸ್ವೀಕೃತವಾದವು.
ಸರಕಾರಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸರಕಾರ ಕೊಡಮಾಡುವ ಎಲ್ಲ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ಸಮರ್ಪಕವಾಗಿ ತಲುಪಿಸಬೇಕು. ಆಹಾರದಲ್ಲಿ ಗುಣಮಟ್ಟವನ್ನು ಕಾಪಾಡಬೇಕು. ಸರಕಾರಿ ಶಾಲೆಗಳಲ್ಲಿಯೂ ಸಹ ಮಕ್ಕಳಿಗೆ ಮಧ್ಯಾಹ್ನ ವಿತರಿಸುವ ಊಟದಲ್ಲಿ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಕಾಪಾಡಿ ಮಕ್ಕಳ ಸುರಕ್ಷತೆಯ ಬಗ್ಗೆಯೂ ಸಹ ಗಮನ ಹರಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಗದಗ ಲೋಕಾಯುಕ್ತ ಇನ್ಸಪೆಕ್ಟರ್ಗಳಾದ ಪರಮೇಶ್ವರ ಕವಟಗಿ, ಎಸ್.ಎಸ್. ತೇಲಿ, ಶಿರಸ್ತೇದಾರ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.