ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಮಾಳವಿಕಾ ಅವಿನಾಶ್ ಮತ್ತು ಶೃತಿಯವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಭೇಟಿಯಾದ ನಟಿಯರು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹಾಗೂ ಖ್ಯಾತ ನಟಿ ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸಿಎಂ ಭೇಟಿ ಬಳಿಕ ಮಾತನಾಡಿದ ನಟಿ ಜಯಮಾಲಾ, ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕೆಂದು ಮನವಿ ಮಾಡಿದ್ದೇವೆ. ಸರೋಜಾದೇವಿ ಅವರಿಗೂ ಕರ್ನಾಟಕ ರತ್ನ ಕೊಡಬೇಕೆಂದು ವಿನಂತಿ ಮಾಡಿದ್ದೇವೆ. ಸರೋಜಾದೇವಿ ಅವರ ಹೆಸರನ್ನ ರಸ್ತೆಗೂ ಇಡಬೇಕೆಂದು ವಿನಂತಿಸಿದ್ದೇವೆ. ಇದಕ್ಕೆ ಸಿಎಂ ಕ್ಯಾಬಿನೆಟ್ನಲ್ಲಿ ಚರ್ಚೆ ಆಗಬೇಕು ಎಂದು ಹೇಳಿದ್ದಾರೆ ಎಂದರು.
ಇನ್ನೂ ನಟಿ ಮಾಳವಿಕಾ ಅವಿನಾಶ್ ಮಾತನಾಡಿ.. ಡಾ.ವಿಷ್ಣುವರ್ಧನ್ ಅವರಿಗೆ 75ನೇ ವರ್ಷದ ಸಂದರ್ಭ. ಹೀಗಾಗಿ ಸಿಎಂ ಭೇಟಿ ಮಾಡಿ ಕರ್ನಾಟಕ ರತ್ನಕ್ಕೆ ಮನವಿ ಮಾಡಿದ್ದೇವೆ. ಸಾಧ್ಯವಾದರೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡ್ತೇನೆ ಎಂದಿದ್ದಾರೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದೇ ರೀತಿ ಬಹುಭಾಷಾ ತಾರೆ ಸರೋಜಾ ದೇವಿಯವರಿಗೂ ಕರ್ನಾಟಕ ರತ್ನ ನೀಡ ಬೇಕೆಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.