ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಭರ್ಜರಿ ಉಡುಗೊರೆ ನೀಡಿದೆ. ಮಧ್ಯಮ ವರ್ಗದವರು, ಬಡವರ ಏಳಿಗೆಗಾಗಿ ಜಿಎಸ್ಟಿ ದರದಲ್ಲಿ ಭಾರೀ ಇಳಿಕೆ ಮಾಡಲಾಗಿದೆ. ಕೇವಲ ಶೇ. 5 ಜಿಎಸ್ಟಿ ಮತ್ತು ಶೇ. 18ರಷ್ಟು ತೆರಿಗೆ ಜಾರಿಗೆ ತಂದಿದ್ದು ಸ್ವಾಗತಾರ್ಹವಾಗಿದೆ. ಇದರಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಗದಗ-ಬೆಟಗೇರಿ ಶಹರ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ವಾತಿ ಅಕ್ಕಿ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ 56ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ತೆರಿಗೆ ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ. ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರು ಬಳಸುವ ವಸ್ತುಗಳ ಮೇಲೆ ಸಂಪೂರ್ಣ ತೆರಿಗೆ ಕಡಿತ ಮಾಡಲಾಗಿದೆ. ಎಲ್ಲಾ ರಾಜ್ಯಗಳು ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆಗೆ ಬೆಂಬಲ ನೀಡಿವೆ ಮತ್ತು ಇದು ಒಮ್ಮತದ ನಿರ್ಧಾರವಾಗಿದೆ.
ಜಿಎಸ್ಟಿ ದರದಲ್ಲಿನ ಇಳಿಕೆಯಿಂದಾಗಿ ಭಾರತದ ಆರ್ಥಿಕತೆಗೆ ಮತ್ತಷ್ಟು ವೇಗ ಸಿಗಲಿದೆ. ಪ್ರಮುಖವಾಗಿ ಸಾಮಾನ್ಯ ಜನರು ಬಳಸುವ ಅಡುಗೆ ವಸ್ತುಗಳ ಮೇಲಿನ ಜಿಎಸ್ಟಿ ದರ ಇಳಿಕೆ ಮಾಡಿದ್ದು ದೇಶದ ಮಹಿಳೆಯರ ಸಂತಸವನ್ನು ಇಮ್ಮಡಿಗೊಳಿಸಿದೆ. ವಿರೋಧ ಪಕ್ಷದವರು ಸದಾಕಾಲ ಜಿಎಸ್ಟಿ ಬಗ್ಗೆ ವಿರೋಧ ಮಾಡುತ್ತಲೇ ಬಂದಿದ್ದರು. ಆದರೆ, ಅವರೆಲ್ಲರ ಬಾಯಿ ಮುಚ್ಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಸ್ವಾತಿ ಅಕ್ಕಿ ಅಭಿಪ್ರಾಯಪಟ್ಟಿದ್ದಾರೆ.