ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಹೆಮ್ಮೆಯ ಪತ್ರಕರ್ತರಾದ ಗ್ಯಾರಂಟಿ ನ್ಯೂಸ್ ಸಂಪಾದಕಿ ರಾಧಾ ಹಿರೇಗೌಡರ್ ಅವರಿಗೆ ಅತ್ಯಂತ ಬೇಜವಾಬ್ದಾರಿಯ ಹಾಗೂ ಉಡಾಫೆಯ ಮಾತನಾಡಿರುವ ಆರ್.ವಿ. ದೇಶಪಾಂಡೆ ಸಮಸ್ತ ಸ್ತ್ರೀಕುಲಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ನಿರ್ಮಲಾ ಕೊಳ್ಳಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಧಾ ಹಿರೇಗೌಡರ್ ಸಾಮಾಜಿಕ ಕಳಕಳಿಯಿಂದ ಆಸ್ಪತ್ರೆ ಬಗ್ಗೆ ಬೇಡಿಕೆ ಇಟ್ಟಾಗ, ತಾಯ್ತನ ಹಾಗೂ ಹೆರಿಗೆ ಕುರಿತು ಆಡಿರುವ ಮಾತು ಮತ್ತು ಹಾವಭಾವ ಸಹಿಸಲು ಸಾಧ್ಯವಿಲ್ಲ. ಹಿರಿಯ ಮುಖಂಡರಾಗಿ, ಸುದೀರ್ಘ ಅವಧಿಗೆ ಅಧಿಕಾರ ನಡೆಸಿದ ಅನುಭವವುಳ್ಳ ದೇಶಪಾಂಡೆ ಅವರೇ ಇಂತಹ ವರ್ತನೆ ತೋರಿದರೆ, ಕಾಂಗ್ರೆಸ್ಸಿನ ಮರಿ ಪುಡಾರಿಗಳು ಇನ್ನು ಹೇಗೆ ವರ್ತಿಸಬಹುದು ಎಂದು ಪ್ರಶ್ನಿಸಿದ್ದಾರೆ.
ಹಲವುಬಾರಿ ಸಚಿವರಾಗಿ, ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿ, ಪ್ರಸ್ತುತ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಆರ್.ವಿ. ದೇಶಪಾಂಡೆ ಅವರಿಗೆ ಇಂತಹ ಮಾತು ಶೋಭೆಯಲ್ಲ. ಅವರ ದರ್ಪ, ದೌಲತ್ತು ಏನಿದ್ದರೂ ಕೆಲಸದ ಮೂಲಕ ತೋರಿಸಬೇಕಿತ್ತು. ಅವಮಾನಿಸಿ ಮಹಿಳಾ ಪತ್ರಕರ್ತರ ಬಾಯಿ ಮುಚ್ಚಿಸುವ ತಂತ್ರದಿಂದ ನಾಡಿನ ಸ್ತ್ರೀಕುಲಕ್ಕೆ ಬೇಸರವಾಗಿದೆ. ಕಾಂಗ್ರೆಸ್ಸಿನವರು ಮಾತೆತ್ತಿದರೆ ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಊರೆಲ್ಲಾ ಹೇಳಿಕೊಂಡು ಓಡಾಡುತ್ತಾರೆ. ಆದರೆ ಮಹಿಳೆಯರ ಬಗ್ಗೆ ಹಾಗೂ ಮಾತೃತ್ವದ ಬಗ್ಗೆ ಗೌರವವೇ ಇಲ್ಲದವರಿಂದ ಸಮಾಜ ಇನ್ನೇನು ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ.