ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಜಗತ್ತಿನಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಸಹ ಅವರಿಗೆ ಓರ್ವ ಗುರು ಮಾರ್ಗದರ್ಶನ ಮಾಡಿರುತ್ತಾನೆ. ತೀರಾ ಹಿಂದುಳಿದ ಕುಗ್ರಾಮದಲ್ಲಿ ಜನಿಸಿದ ನನಗೆ ಅನೇಕ ಗುರುಗಳು ಮಾರ್ಗದರ್ಶನ ಮಾಡಿದ್ದರು. ಆದ್ದರಿಂದ ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಸಮರ್ಪಕವಾಗಿ ನೀಡಲು ಮುಂದಾಗಬೇಕೆಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಶಿರಹಟ್ಟಿಯ ಉತ್ಸವ ಗಾರ್ಡನ್ನಲ್ಲಿ ಜಿ.ಪಂ, ತಾಲೂಕಾಡಳಿತ ಶಿರಹಟ್ಟಿ/ಲಕ್ಷ್ಮೇಶ್ವರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯವಾಗಿದ್ದರಿಂದ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಮಕ್ಕಳು 5ನೇ ತರಗತಿಗೆ ಬರುವುದರೊಳಗಾಗಿ ಕನ್ನಡ ಭಾಷೆ ಓದಲಿ ಮತ್ತು ಬರೆಯಲು, ಗಣಿತದಲ್ಲಿ ಲೆಕ್ಕಗಳ ಬಗ್ಗೆಯೂ ಸಹ ತಿಳುವಳಿಕೆ ಬರುವ ರೀತಿಯಲ್ಲಿ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಬೇಕೆಂದು ಹೇಳಿದರು.
ತಹಸೀಲ್ದಾರ ರಾಘವೇಂದ್ರ ರಾವ್ ಕೆ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ತಾಲೂಕು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮವಿದ್ದು, ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ನಂ.1 ಸ್ಥಾನ ಪಡೆಯುವಂತಾಗಬೇಕೆಂದು ಹೇಳಿದರು.
ಬಿಇಓ ಎಚ್. ನಾಣಕೀ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳಟ್ಟಿಯ ರಾಮಲಿಂಗೇಶ್ವರ ದಾಸೋಹಮಠದ ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ.ಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಜಿ.ಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ ತಿಪ್ಪಣ್ಣ ಕೊಂಚಿಗೇರಿ, ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಶರಣಬಸವ ಪಾಟೀಲ, ಬಸವರಾಜ ಕಳಸಾಪೂರ, ಬಿ.ಎಸ್. ಹರ್ಲಾಪೂರ, ಗಿರೀಶ ಕೊಡಬಾಳ, ಎಸ್.ಎಫ್. ಮಠದ, ಐ.ಎಸ್. ಮೆಡ್ಲೇರಿ, ಚಂದ್ರು ನೇಕಾರ, ಆರ್.ಎಂ. ಯಣಿಗಾರ, ಎಫ್.ಬಿ. ಹಾವನೂರ, ಬಿ.ಎಚ್. ಮಾನೇಗಾರ, ಸತೀಶ ಪಶುಪತಿಹಾಳ, ಬಿ.ಎಸ್. ಪೂಜಾರ, ಸುರೇಶ ಸರ್ಜಾಪೂರ, ಶ್ರೀನಿವಾಸ ನಾಯ್ಕ, ವಿಜಯಲಕ್ಷ್ಮೀ ಮಾಲಸೂರೆ ಮುಂತಾದವರು ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆಯ ಉಪನಿರ್ದೆಶಕ ಆರ್.ಎಸ್. ಬುರಡಿ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೇ ಮಕ್ಕಳ ಶ್ರೇಯಸ್ಸಿಗೆ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಕಾಲಕ್ಕೆ ತಕ್ಕಂತೆ ಶಿಕ್ಷಕರು ಅಪ್ಡೇಟ್ ಆಗಬೇಕು. ಶಿಕ್ಷಕರು ಅಧ್ಯಯನ ಮಾಡಬೇಕು, ಮಕ್ಕಳಿಗೆ ಒಳ್ಳೆಯ ನೆನಪಿನ ಬುತ್ತಿ ಕಟ್ಟಿಕೊಡುವ ಶಕ್ತಿ ಶಿಕ್ಷಕರಿಂದಾಗಬೇಕು. 7 ವರ್ಷ ನನ್ನ ಬಿಇಓ ಅವಧಿಯಲ್ಲಿ 65 ಲಕ್ಷ ಸಮುದಾಯ, ಸಂಘ-ಸಂಸ್ಥೆಗಳಿಂದ ಆರ್ಥಿಕ ಸಹಾಯ ಪಡೆದು ಶಾಲೆಗಳಲ್ಲಿ ಮೂಲಸೌಲಭ್ಯ ಕಲ್ಪಿಸಲಾಗಿತ್ತು ಎಂದರು.


