ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೇಗೋ ಅದೇ ರೀತಿ ಕಸದ ಸಮಸ್ಯೆಯೂ ಸಹ ಇದೆ. ನಗರದಲ್ಲಿ ಆಗಾಗ ಕಸದ ಸಮಸ್ಯೆ ಉಲ್ಬಣಿಸುತ್ತಲೇ ಇದೆ. ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊರಟಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಇದೀಗ ಕಂಡ ಕಂಡಲ್ಲಿ ಕಸ ಎಸೆಯುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲು ಸಿದ್ಧತೆ ಮಾಡಿದೆ.
ಹೌದು ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಮೊದಲ ಬಾರಿಗೆ 500 ರೂ. ದಂಡ ವಿಧಿಸಲಿರುವ ಮಾರ್ಷಲ್ಗಳ, ಪದೇ ಪದೇ ಅದೇ ತಪ್ಪು ಮಾಡಿದರೆ 2 ಸಾವಿರ ರೂಪಾಯಿ ತನಕ ದಂಡ ವಸೂಲಿ ಮಾಡಲಿದ್ದಾರೆ. ಪ್ಲಾಸ್ಟಿಕ್ ನಿಷೇಧ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ಲಾಸ್ಟಿಕ್ ಬಳಕೆ ಮಾಡುವವರಿಂದ ಬರೋಬ್ಬರಿ 38 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದೆ. ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ಕಸದ ವಿಲೇವಾರಿಗೆ ಕಣ್ಣೂರು ಲ್ಯಾಂಡ್ ಫಿಲ್ಲಿಂಗ್ ಬಳಕೆ ಮಾಡುತ್ತಿರುವ ಜಿಬಿಎ,
ಇದೀಗ ಬೀದಿ ಬೀದಿಗಳಲ್ಲಿ ಕಸ ವಿಂಗಡನೆಯಿಂದ ಆಗುತ್ತಿದ್ದ ಸಮಸ್ಯೆಗೂ ಪರಿಹಾರ ಕಂಡುಹಿಡಿಯಲು ಚಿಂತನೆ ನಡೆಸಿದೆ. ಸದ್ಯ ಬೆಂಗಳೂರಿನ 26 ಕಡೆಗಳಲ್ಲಿ ಟ್ರಾನ್ಸ್ ಫಾರ್ಮಮೇಷನ್ ಸೆಂಟರ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ಮುಂದಾಗಿರುವ ಜಿಬಿಎ, ಸಾರ್ವಜನಿಕ ಸ್ಥಳಗಳಲ್ಲಿ ಕಸದಿಂದ ಆಗುತ್ತಿರುವ ಸಮಸ್ಯೆಗಳನ್ನು ಪತ್ತೆಹಚ್ಚಲು ಹೊರಟಿದೆ. ಇತ್ತ ರಾಜಧಾನಿಯ ಕಸದ ಸಮಸ್ಯೆ ಬಗ್ಗೆ ಪದೇ ಪದೇ ದೂರು ಬರುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಜಿಬಿಎ, ಇದೀಗ ತ್ಯಾಜ್ಯ ವಿಲೇವಾರಿಯಲ್ಲಿ ಸುಧಾರಣೆ ತರಲು ತಯಾರಿ ನಡೆಸಿದೆ.



