ವಿಜಯಸಾಕ್ಷಿ ಸುದ್ದಿ, ಗದಗ: ವೃದ್ಧಾಪ್ಯದಲ್ಲಿ ಬದುಕಿಗೆ ಆಸರೆ ಬೇಕು. ವಿಕಲಚೇತನ ಮಗಳೊಡನೆ ಬದುಕನ್ನು ನೂಕುತ್ತಿರುವ ತಾಯಿ ಹೃದಯಕ್ಕೆ ನಾವೆಲ್ಲರೂ ಬೆಂಬಲಿಸಿ ಅವರಿಗೆ ಸ್ಪೂರ್ತಿ, ಆತ್ಮಸ್ಥೈರ್ಯ ತುಂಬಿದರೆ ನೊಂದ ಬದುಕಿಗೆ ಆಸರೆಯಾದೀತು ಎಂದು ಗದಗ ಜಯೆಂಟ್ಸ್ ಕ್ಲಬ್ನ ಸಖಿ ಸಹೇಲಿಯ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.
ಅವರು ಗದುಗಿನ ವಯೋವೃದ್ಧೆ ಬೇಗಂ ಬಳ್ಳಾರಿ ಅವರ ನಿವಾಸಕ್ಕೆ ಸಂಘಟನೆಯ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಅವರಿಗೆ ಮನೋಸ್ಥೈರ್ಯ ತುಂಬಿ ಮಾತನಾಡಿದರು.
ಪತಿಯ ಅಗಲುವಿಕೆಯಲ್ಲೂ ಈರ್ವರು ವಿಕಲಚೇತನ ಮಕ್ಕಳನ್ನು ಕಟ್ಟಿಕೊಂಡು ಬದುಕಿನ ಬಂಡಿ ಸಾಗಿಸಿಕೊಂಡು ಬಂದ ಬೇಗಂ ಮಕ್ಕಳನ್ನು ಬಾಲ್ಯದಿಂದಲೂ ಜೋಪಾನ ಮಾಡಿಕೊಂಡು ಬಂದವರು. ಇತ್ತೀಚೆಗೆ ಓರ್ವ ಮಗಳ ಸಾವಿನಿಂದ ನೊಂದುಕೊಂಡಿದ್ದು, ಇನ್ನೋರ್ವ ಮಗಳನ್ನು ಕಳೆದ 60 ವರ್ಷಕ್ಕೂ ಮೇಲ್ಪಟ್ಟು ಹಾಸಿಗೆಯಲ್ಲೇ ಮಲಗಿಸಿ ಜೋಪಾನ ಮಾಡಿಕೊಂಡು ಬಂದ ಮಹಾನ್ ತಾಯಿ ಆಗಿದ್ದಾರೆ ಎಂದರು.
ನೊಂದ ಜೀವಿ ಬೇಗಂ ಮಾತನಾಡಿ, ನನಗೆ ಎರಡು ವಿಶೇಷ ಚೇತನ ಮಕ್ಕಳಿದ್ದು, ಇತ್ತೀಚೆಗೆ ಒಬ್ಬ ಮಗಳು ಮೃತಳಾಗಿದ್ದಾಳೆ. ನನ್ನದು ಇಳಿ ವಯಸ್ಸು, ಆಸರೆ ಇಲ್ಲ. ಕುಟುಂಬ ಬಾಂಧವರು ತನ್ನೊಂದಿಗೆ ಇರಬೇಕೆಂದು ಬಯಸುವೆ. ತಮ್ಮ ನೋವಿಗೆ ಸ್ಪಂದಿಸಿದ ಸಖಿ-ಸಹೇಲಿಯ ಸಂಘಟನೆಯ ಪದಾಧಿಕಾರಿಗಳಿಗೆ ಕೃತಜ್ಞತೆ ತಿಳಿಸಿದರು.
ರೇಖಾ ರೊಟ್ಟಿ ಮಾತನಾಡಿ, ದೇಹದ ಸಂಪೂರ್ಣ ಭಾಗ ಅಂಗವೈಕಲ್ಯತೆ ಹೊಂದಿದ ಮಗಳನ್ನು ಸಾಕುತ್ತ, ತಾನೂ ನೋವು ಅನುಭವಿಸಿ ಆಸರೆಗಾಗಿ ಹಂಬಲಿಸುವ ಬೇಗಂ ಅವರ ಮಾತೃ ಹೃದಯದ ಯಶೋಗಾಥೆ ಮೆಚ್ಚುವಂತಹದ್ದು ಎಂದರು.
ಸಂಘಟನೆಯ ನಿರ್ಮಲಾ ಪಾಟೀಲ, ಮಧು ಕರಿಬಿಷ್ಠಿ, ವಿದ್ಯಾ ಶಿವನಗುತ್ತಿ, ಶಶಿಕಲಾ ಮಾಲೀಪಾಟೀಲ, ಮಾಧುರಿ ಮಾಳೆಕೊಪ್ಪ, ಸುಷ್ಮೀತಾ ವೇರ್ಣೆಕರ, ಅಶ್ವಿನಿ ಮಾದಗುಂಡಿ, ಶಾಂತಾ ತುಪ್ಪದ, ಶ್ರೀದೇವಿ ಮಹೇಂದ್ರಕರ, ಸುಗ್ಗಲಾ ಯಳಮಲಿ ಮುಂತಾದವರು ಉಪಸ್ಥಿತರಿದ್ದರು.
ಚಂದ್ರಕಲಾ ಸ್ಥಾವರಮಠ ಮಾತನಾಡಿ, ಬದುಕಿನ ಪಯಣಕ್ಕೆ ಆಸರೆ, ಜೊತೆ ಬೇಕು. ಕುಟುಂಬದ ಸಹಕಾರವಿರಬೇಕು. ಆದರೆ ಈ ತಾಯಿಗೆ ಯಾವುದೂ ಇಲ್ಲ. ಇಳಿ ವಯಸ್ಸಿನಲ್ಲಿ ತಮ್ಮವರು ಯಾರೂ ಇಲ್ಲ ಎಂಬ ಕೊರಗಿನಲ್ಲಿರುವ ಇವರಿಗೆ ನಾವೆಲ್ಲರೂ ಸ್ಪಂದಿಸಬೇಕಿದೆ ಎಂದರು.