ಬೆಂಗಳೂರು: ಮದ್ದೂರಿನಲ್ಲಿ 34 ವರ್ಷಗಳಿಂದ ಗಣಪತಿ ಉತ್ಸವ ನಡೆಯುತ್ತಿದ್ದು, ಒಂದು ವರ್ಷವೂ ಘರ್ಷಣೆ ಆಗಿರಲಿಲ್ಲ; ಕಳೆದ ವರ್ಷ ಡಿಸೆಂಬರ್ನಲ್ಲಿ ಮಸೀದಿ ಅಕ್ರಮವಾಗಿ ನಿರ್ಮಾಣಗೊಂಡ ಬಳಿಕ ಗಲಾಟೆಗೆ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಆರೋಪಿಸಿದ್ದಾರೆ. ಅಕ್ರಮ ಮಸೀದಿ ವಿರುದ್ಧ ಕ್ರಮ ಜರುಗಿಸಬೇಕು; ಅಮಾನುಷವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಾಯಾಳುಗಳಿಗೆ ಸರಕಾರ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸತ್ಯಶೋಧನಾ ಸಮಿತಿಯ ವರದಿ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಗಲಭೆ ಮಾಡುವ ಉದ್ದೇಶದಿಂದ ಬೀದಿ ದೀಪ ನಂದಿಸಿದ್ದಾರೆ. ಪೊಲೀಸರು ಗಣಪತಿ ಮೆರವಣಿಗೆಗೆ ಯಾವುದೇ ರೀತಿ ಪೂರ್ವತಯಾರಿ ಇಲ್ಲದೇ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದರು ಎಂದು ಟೀಕಿಸಿದರು.
ಶಾಂತ ರೀತಿಯಲ್ಲಿ ತೆರಳುತ್ತಿದ್ದ ಮೆರವಣಿಗೆ ಮೇಲೆ ಪೊಲೀಸರು ಏಕಾಏಕಿ ಲಾಠಿಚಾರ್ಜ್ ಮಾಡಿದ್ದಾಗಿ ಆಕ್ಷೇಪಿಸಿದರು. ಜಿಲ್ಲಾಡಳಿತ- ಪೊಲೀಸ್ ಇಲಾಖೆಯ ವೈಫಲ್ಯವೇ ಇದಕ್ಕೆ ನೇರ ಕಾರಣ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ ಎಂದು ನುಡಿದರು.ಮಂಡ್ಯ ಜಿಲ್ಲೆ ಮದ್ದೂರಿನ ರಾಮ್- ರಹೀಂ ನಗರದಲ್ಲಿ 34 ವರ್ಷಗಳಿಂದ ನಿರಂತರವಾಗಿ ಇಲ್ಲಿ ಗಣಪತಿ ಪ್ರತಿಷ್ಠೆ ಮಾಡಿ ವಿಸರ್ಜನೆ ನಡೆಯುತ್ತಿತ್ತು.
ಸೆ.7ರಂದು ಇಲ್ಲಿನ ಹಿಂದೂ ಗಣಪತಿ ಉತ್ಸವದ ವಿಸರ್ಜನೆಗೆ ಹೊರಟಾಗ ಹೊಸದಾಗಿ ನಿರ್ಮಿಸಿದ ಮಸೀದಿ ಮುಂಭಾಗದಲ್ಲಿ ಮೆರವಣಿಗೆ ತೆರಳುವಾಗ ಮ್ಯೂಸಿಕ್, ಬ್ಯಾಂಡ್ ಸೆಟ್ ಬಾರಿಸದೇ ಇರಲು ಪೊಲೀಸರು ಕೋರಿದ್ದರು. ಅದರಂತೆ ಕಾರ್ಯಕರ್ತರು ನಿಶ್ಶÀಬ್ದವಾಗಿ ತೆರಳುತ್ತಿದ್ದರು. 7.20ಕ್ಕೆ ಅಲ್ಲಿದ್ದ ಹೈಮಾಸ್ಟ್ ಬೀದಿದೀಪವನ್ನು ಆರಿಸಿದ್ದರು ಎಂದು ಆರೋಪಿಸಿದರು.
ಏಕಾಏಕಿ ಮನೆಗಳ ಮೇಲಿನ ಮಸೀದಿ ಕಡೆಯಿಂದ ಕಲ್ಲು ತೂರಿದ್ದಾರೆ. ಬಿಗು ವಾತಾವರಣ ನಿರ್ಮಾಣವಾಗಿದ್ದು, ಗಣಪತಿ ಉತ್ಸವದಲ್ಲಿ ತೆರಳುವ ಕಾರ್ಯಕರ್ತರ ಮೇಲೆ ಪೊಲೀಸರು ಬಲವಾದ ಲಾಠಿ ಪ್ರಹಾರ ಮಾಡಿದ್ದರು ಎಂದು ವಿವರಿಸಿದರು. ಗಣಪತಿ ವಿಗ್ರಹವನ್ನು ಪೊಲೀಸ್ ವಶಕ್ಕೆ ಪಡೆದಿದ್ದು, ಪೊಲೀಸರೇ ಗಣಪತಿ ವಿಸರ್ಜನೆ ಮಾಡಿದ್ದಾರೆ ಎಂದರು.
ಹಾದಿ ಬೀದಿಯಲ್ಲಿ ಹೋಗುವವರ ಮೇಲೂ ಲಾಠಿ ಚಾರ್ಜ್ ಮಾಡಿದ್ದು, ಮರುದಿನ ಕಾರ್ಯಕರ್ತರು ಮದ್ದೂರು ಬಂದ್ ಕರೆ ನೀಡಿದ್ದರು. ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದರು. ಈ ಎಲ್ಲ ಘಟನೆಗೆ ಬಿಜೆಪಿ ಕುಮ್ಮಕ್ಕೇ ಕಾರಣ. ಆರೆಸ್ಸೆಸ್, ಬಜರಂಗದಳ ಕಾರಣ ಎಂದು ಎಲ್ಲೋ ಕುಳಿತು ಹೇಳಿಕೆ ನೀಡಿದ್ದರು ಎಂದು ಟೀಕಿಸಿದರು.



