ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ನೆಲ ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಇಲ್ಲಿಂದ 20 ಕಿ.ಮೀ ಸುತ್ತಲೂ ವಿಶ್ವ ಪಾರಂಪರಿಕ ಸ್ಥಳವಾಗಲು ಅರ್ಹತೆ ಪಡೆದ ಸ್ಥಳಗಳಾಗಿವೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ವಿಶ್ವವಿದ್ಯಾಲಯ) ಇವರುಗಳ ಸಹಯೋಗದಲ್ಲಿ ವಿವಿ ಕೌಶಲ್ಯ ವಿಕಾಸ ಭವನದಲ್ಲಿ ಶನಿವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತಿರದ ಲಕ್ಕುಂಡಿಯಲ್ಲಿ ತಲಾ 101 ಬಾವಿ, ದೇವಸ್ಥಾನಗಳಿವೆ. ವಿಶಾಲವಾದ ಕೆರೆ, ದೊಡ್ಡಬಸಪ್ಪನ ದೇವಾಲಯದ ಶೈಲಿ ಡಂಬಳದಲ್ಲಿದೆ. ಪ್ರಾಚೀನವಾದ ದೇವಾಲಯ, ಪರಿಸರ, ಸೌಹಾರ್ದಯುತ ಬದುಕು ಮುಳಗುಂದದಲ್ಲಿ ಸಿಗುತ್ತವೆ. ಗದಗ ತಾಲೂಕು ಸೇರಿದಂತೆ ಜಿಲ್ಲೆಯ ಸೂಡಿ, ಕೋಟಮುಚಗಿ, ಗಜೇಂದ್ರಗಡ, ನರಗುಂದ ಇವೆಲ್ಲವೂ ಪ್ರವಾಸಿ ತಾಣಗಳಾಗಿವೆ. ಇವೆಲ್ಲವುಗಳು ಗದಗ ಜಿಲ್ಲೆಯಲ್ಲಿರುವುದು ನಮಗೆಲ್ಲ ಹೆಮ್ಮೆ ಎಂದರು.
ಲಕ್ಕುಂಡಿಯಲ್ಲಿ ಈಗಾಗಲೇ ಉತ್ಖನನ ಪ್ರಾರಂಭ ಮಾಡಲಾಗಿದೆ. ಒಂದೇ ದಿನದಲ್ಲಿ 1,100 ಪ್ರಾಚ್ಯಾವಶೇಷಗಳನ್ನು ಸಂಗ್ರಹ ಮಾಡಲಾಗಿದೆ. ನಮ್ಮ ಸುತ್ತ-ಮುತ್ತ ಐತಿಹಾಸಿಕ ಪ್ರಾಚ್ಯಾವಶೇಷ ಸಂಪತ್ತು ಇದೆ. ಇದರ ಬಗ್ಗೆ ವಿಶೇಷ ಅಭಿಮಾನ ಇದೆ. ವಿದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಅತೀ ಹೆಚ್ಚು ಪ್ರವಾಸಿ ತಾಣಗಳಿವೆ ಎಂದರು.
ಕರ್ನಾಟಕದ ಕಾಸರಗೋಡದಿಂದ ಕಾರವಾರದವರೆಗೆ ಅಂದಾಜು 320 ಕಿ.ಮೀ ಸುಂದರ ಪ್ರವಾಸಿ ತಾಣವಾಗಿದೆ. ಪ್ರವಾಸೋದ್ಯಮ ಐಷಾರಾಮಿ ಜನರ ಖುಷಿಯ ಉದ್ಯಮ ಅಲ್ಲ. ಪ್ರವಾಸೋದ್ಯಮ ಜನರ ಮನಸ್ಸಿನಲ್ಲಿ ಬದಲಾವಣೆ ತರುವುದಾಗಿದೆ. ಕೋಶ ಓದಬೇಕು, ದೇಶ ಸುತ್ತಬೇಕು ಎನ್ನುವ ಗಾದೆ ಇದೆ. ದೇಶ ಸುತ್ತುವುದರಿಂದ ಬದುಕಿನಲ್ಲಿ ಬದಲಾವಣೆ ಆಗಲು ಸಾಧ್ಯವಾಗುತ್ತದೆ ಎಂದು ಎಚ್.ಕೆ. ಪಾಟೀಲ ನುಡಿದರು.
ಭಾರತ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ವಿದೇಶದಲ್ಲಿ ಜೋಗ ಜಲಪಾತ, ಶರಾವತಿ ಜಲಪಾತ, ಲಕ್ಕುಂಡಿಯ ಬಸ್ತಿ, ಬಾದಾಮಿ, ಐಹೊಳೆಯಲ್ಲಿರುವ ಐತಿಹಾಸಿಕ ದೇವಸ್ಥಾನಗಳು ಕಾಣಸಿಗುವುದಿಲ್ಲ. ಜಿಲ್ಲೆಯ 48 ತಾಣ ಸೇರಿ ರಾಜ್ಯದ 1200 ತಾಣಗಳನ್ನು ಒಳಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ. ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ವಿಕ್ಷೀಸಲು ಅವಕಾಶ ಕಲ್ಪಿಸಿಕೊಡಲಾಗುವುದೆಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಸಿದ್ದು ಪಾಟೀಲ, ಪ್ರಭು ಬುರಬುರೆ, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ನಾಡಗೌಡರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್, ಡಾ. ಶರಣು ಗೋಗೇರಿ, ಗಂಗಪ್ಪ ಎಂ, ಕೋಟ್ರೇಶ್ ವಿಭೂತಿ, ಪ್ರಶಾಂತ್ ಜೆ.ಸಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದಿಂದ 1,200 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಅದರಲ್ಲಿ 48 ತಾಣಗಳು ಗದಗ ಜಿಲ್ಲೆಯಲ್ಲಿವೆ ಎನ್ನುವುದು ನಮ್ಮ ಹೆಮ್ಮೆಯಾಗಿದೆ. ಕಪ್ಪತ್ತಗುಡ್ಡ, ಪ್ರಾಣಿ ಸಂಗ್ರಹಾಲಯ ಸೇರಿದಂತೆ ಹಲವಾರು ಪ್ರದೇಶಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೆಲವೇ ತಿಂಗಳಲ್ಲಿ ಯುನೆಸ್ಕೋದಿಂದ ಲಕ್ಕುಂಡಿ ಐತಿಹಾಸಿಕ ವಿಶ್ವ ಪಾರಂಪರಿಕ ಸ್ಥಳವೆಂದು ಗುರುತಿಸುವ ಕಾಲ ಬರಲಿದೆ ಎಂದು ಸಚಿವ ಎಚ್.ಕೆ. ಪಾಟೀಲರು ವಿಶ್ವಾಸ ವ್ಯಕ್ತಪಡಿಸಿದರು.


