ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹರ್ಷಿ ವಾಲ್ಮೀಕಿ ಓರ್ವ ಮಹಾನ್ ಕವಿ. ಅವರು ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಮಹಾಕಾವ್ಯವನ್ನು ರಚಿಸಿದರು. ಇದರಲ್ಲಿ ಭಗವಾನ್ ಶ್ರೀ ರಾಮನ ಸಂಪೂರ್ಣ ಜೀವನಶೈಲಿಯನ್ನು ಜಗತ್ತಿಗೇ ತೋರಿಸಿಕೊಟ್ಟ ಮಹರ್ಷಿ ವಾಲ್ಮೀಕಿಯವರ ಜೀವನ ನಮ್ಮ ಸಮಾಜಕ್ಕೆ ಒಂದು ಪಾಠವಿದ್ದಂತೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ತಾಲೂಕಾಡಳಿತ ಹಾಗೂ ವಾಲ್ಮೀಕಿ ಸಮಾಜ ಬಾಂಧವರಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಪ್ರಪಂಚಕ್ಕೆ ರಾಮಾಯಣದಂತಹ ಮೇರು ಕೃತಿ ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. 24 ಸಾವಿರಕ್ಕೂ ಹೆಚ್ಚು ಶ್ಲೋಕಗಳನ್ನೊಳಗೊಂಡ ರಾಮಾಯಣವನ್ನು ರತ್ನಾಕರ ಎಂಬ ಮೂಲ ಹೆಸರಿನ ವಾಲ್ಮೀಕಿಯವರು ರಚನೆ ಮಾಡಿರುವುದು ಇತಿಹಾಸ. ಮಹರ್ಷಿ ವಾಲ್ಮೀಕಿ ಅವರ ಆಚಾರ-ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ನವೆಂಬರ್ 3ರಂದು ವಾಲ್ಮೀಕಿ ಜಯಂತಿಯನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತಹಸೀಲ್ದಾರ ಧನಂಜಯ ಎಂ, ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ನಾಗರಾಜ ಮಡಿವಾಳರ, ವಾಲ್ಮೀಕಿ ಸಮಾಜದ ತಾಲೂಕಾ ಅಧ್ಯಕ್ಷ ಭೀಮಣ್ಣ ಯಂಗಾಡಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಪಿಎಸ್ಐ ನಾಗರಾಜ ಗಡಾದ, ಹಿರಿಯ ಮುಖಂಡರಾದ ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ಅನಿಲ ಮುಳಗುಂದ, ಥಾವರೆಪ್ಪ ಲಮಾಣಿ, ರಾಜು ಓಲೇಕಾರ, ಹುಣಸಿಮರದ, ಬಿ.ಎಸ್. ಹಡಪದ, ಕೆ.ಓ. ಹೂಲಿಕಟ್ಟಿ, ನಾಗರಾಜ ಜಾಲಿಮರದ, ದುಂಡೇಶ ಕೊಟಗಿ, ಸಿ.ಆರ್. ಕೆಂಚಕ್ಕನವರ, ಹನುಮಂತಪ್ಪ ನಂದೆಣ್ಣವರ, ಹೆಸ್ಕಾಂ ಎಇ ಆಂಜನೇಯಪ್ಪ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಸ್. ಸಂಕನೂರ, ಮಾಂತೇಶ ತಳವಾರ, ಸಚಿನ್ ಮೇಲ್ಮುರಿ, ಬಿ.ಬಿ. ಬಳಿಗಾರ, ಕಲ್ಲಪ್ಪ ಗಂಗಣ್ಣವರ ಮುಂತಾದವರಿದ್ದರು. ಶಿಕ್ಷಕ ಈಶ್ವರ ಮೆಡ್ಲೇರಿ ನಿರೂಪಿಸಿದರು.
ಸಮಾಜದ ಹಿರಿಯ ಮುಖಂಡ ಎನ್.ಎನ್. ನೆಗಳೂರ ಮಾತನಾಡಿ, ಜಗತ್ತಿಗೆ ರಾಮಾಯಣದಂತಹ ಮಹಾನ್ ಕಾವ್ಯವನ್ನು ಕೊಡುಗೆ ನೀಡಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ಕಾಡಿನಲ್ಲಿ ಬೇಟೆಯಾಡುತ್ತಾ ಜೀವನ ಸಾಗಿಸುತ್ತಿರುವ ಸಂದರ್ಭದಲ್ಲಿ ಜ್ಞಾನೋದಯವಾಗಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿದರು. ಇಂತಹ ಮಹಾನ್ ದಾರ್ಶನಿಕರ ವ್ಯಕ್ತಿತ್ವವನ್ನು ಒಂದೇ ಜಾತಿಗೆ ಸೀಮಿತಗೊಳಿಸುತ್ತಿರುವುದು ನೋವಿನ ಸಂಗತಿ. ನಮ್ಮ ಸಮಾಜದಲ್ಲಿ ಆಗಿಹೋದ ಎಲ್ಲ ಮಹನೀಯರು ಸಮಸ್ತ ಸಮಾಜಕ್ಕೆ ಸಂಬಂಧಿಸಿದವರಾಗಿದ್ದಾರೆ ಎನ್ನುವದನ್ನು ಅರಿತುಕೊಳ್ಳಬೇಕು ಎಂದರು.