ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಕೆಲಸ ಮಾಡುತ್ತಿರುವ ತಾಲೂಕಿನ ನರೇಗಾ ಕೂಲಿಕಾರರು ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯಗೊಳಿಸಿದ್ದು, 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಜಾಬ್ಕಾರ್ಡ್ ಹೊಂದಿರುವ ಕೂಲಿಕಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಕರೆ ನೀಡಿದ್ದಾರೆ.
ಅವರು ನರೇಗಾ ಕೂಲಿಕಾರ್ಮಿಕರ ಜಾಬ್ ಕಾರ್ಡಗೆ ಸ್ಥಳದಲ್ಲಿಯೇ ಇ-ಕೆವೈಸಿ ಮಾಡುವ ಕಾರ್ಯದ ಮಾಹಿತಿ ನೀಡಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಬಂದ ಸೂಚನೆಯ ಮೇರೆಗೆ ಸೆಪ್ಟಂಬರ್ 30ರೊಳಗಾಗಿ ಎನ್ಎಂಎಎಸ್ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್) ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿದೆ. ಆದರೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಕೂಲಿಕಾರರು ಈ ಪ್ರಕ್ರಿಯೆ ಪೂರ್ಣಗೊಳಿಸದಿರುವುದರಿಂದ ತಾಲೂಕು ಪಂಚಾಯಿತಿಯ ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಅಕ್ಟೋಬರ್ 20ರೊಳಗಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ ಎಂದರು.
ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕೂಲಿ ಪಾವತಿಯಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಜೊತೆಗೆ ಕಾರ್ಮಿಕರ ಹಾಜರಾತಿಯನ್ನು ಮುಖ ಆಧಾರಿತ ತಂತ್ರಾಂಶದ ಮೂಲಕ ಎನ್ಎಂಎಎಸ್ ಅಪ್ಲಿಕೇಶನ್ನಲ್ಲಿ ನಿಖರವಾಗಿ ದಾಖಲಿಸಬಹುದು. ಇದು ನರೇಗಾ ಯೋಜನೆಯ ವಿಶ್ವಾಸಾರ್ಹತೆ ಮತ್ತು ಪರಿಣಾಮಕಾರಿತೆಯನ್ನು ಹೆಚ್ಚಿಸುತ್ತದೆ. ಸದ್ಯದಲ್ಲೇ ಎನ್ಎಂಎಎಸ್ ಅಪ್ಲಿಕೇಶನ್ನಲ್ಲಿ ಕಾರ್ಮಿಕರ ಫೋಟೋ ಸೆರೆಹಿಡಿದು ಆಧಾರ್ ಸಂಖ್ಯೆಯೊಡಿಗೆ ಮುಖ ಹೊಂದಾಣಿಕೆ ಮೂಲಕ ಹಾಜರಾತಿ ದೃಢಪಡಿಸಲಾಗುತ್ತಿದೆ. ಇ-ಕೆವೈಸಿ ಪೂರ್ಣಗೊಳಿಸದ ಕಾರ್ಮಿಕರ ಹಾಜರಾತಿಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.
“ಲಕ್ಷ್ಮೇಶ್ವರ ತಾಲೂಕಿನ ಒಟ್ಟು 14 ಗ್ರಾ.ಪಂಗಳಲ್ಲಿ 18146 ಕುಟುಂಬಗಳಿದ್ದು, 41544 ನೋಂದಣಿಯಾದ ಕೂಲಿಕಾರರು ಇದ್ದಾರೆ. ಅದರಲ್ಲಿ 29136 ಸಕ್ರಿಯ ಕೂಲಿಕಾರರು ಇರುತ್ತಾರೆ. ಇವರೆಲ್ಲರೂ ಇ-ಕೆವೈಸಿ ಮಾಡಿಕೊಳ್ಳಲು ತಿಳಿಸಲಾಗಿದೆ. ತಾಲೂಕಿನಲ್ಲಿಸಾಮೂಹಿಕ ಹಾಗೂ ವೈಯಕ್ತಿಕ ಕಾಮಗಾರಿಗಳ ಮೂಲಕ ಕೂಲಿಕಾರರಿಗೆ 100 ದಿನಗಳ ಕನಿಷ್ಠ ಉದ್ಯೋಗ ಒದಗಿಸಲಾಗುತ್ತಿದ್ದು, ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಎಲ್ಲಾ ಕಾರ್ಮಿಕರು ತಕ್ಷಣ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು”
– ಕೃಷ್ಣಪ್ಪ ಧರ್ಮರ
ತಾ.ಪಂ ಇಓ, ಲಕ್ಷ್ಮೇಶ್ವರ
“ಇ-ಕೆವೈಸಿ ಸಂಬಂಧವಾಗಿ ತಾಲೂಕಿನ ಎಲ್ಲಾ ಗ್ರಾ.ಪಂಗಳಲ್ಲಿ ಸ್ವಚ್ಛತಾ ವಾಹಿನಿ, ಡಂಗೂರ ಸಾರುವ ಮೂಲಕ ಪ್ರಚಾರಪಡಿಸಲಾಗಿದೆ. ಎಲ್ಲಾ ಕೂಲಿಕಾರ್ಮಿಕರು ಗ್ರಾಮ ಪಂಚಾಯಿತಿಗೆ ತೆರಳಿ ಸಿಬ್ಬಂದಿಗಳವರನ್ನು ಸಂಪರ್ಕಿಸಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು”
– ಮಂಜುನಾಥ್ಸ್ವಾಮಿ ಹೆಚ್.ಎಂ.
ತಾಲೂಕು ಐಇಸಿ ಸಂಯೋಜಕರು.