- ವರಿಷ್ಠರಿಂದ ಇನ್ನೂ ಬಾರದ ಸಂದೇಶ
- ರೋಚಕತೆ ಘಟ್ಟಕ್ಕೆ ತಲುಪಿದ ಸಿಎಂ ಬದಲಾವಣೆ
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಸಿಎಂ ಬದಲಾವಣೆ ವಿಷಯ ಸಿನಿಮಾ ಕ್ಲೈಮಾಕ್ಸ್ ರೀತಿ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಂಜೆಯೊಳಗೆ ವರಿಷ್ಠರ ಸಂದೇಶ ಬರುತ್ತೆ ಬಂದ ಬಳಿಕ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ ರಾತ್ರಿ 9 ಗಂಟೆಯಾದರೂ ವರಿಷ್ಠರ ಸಂದೇಶ ಬಂದಿರುವ ಬಗ್ಗೆ ಖಚಿತವಾಗಿಲ್ಲ. ಸಂಜೆ ಬೆಂಗಳೂರಿಗೆ ವಾಪಸ್ ಬಂದ ಸಿಎಂ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಸಂದೇಶ ಬರಬಹುದು ಎನ್ನುತ್ತಲೇ ನಾಳೆ ಮಧ್ಯಾಹ್ನ 2 ಗಂಟೆಗೆ ರಾಜ್ಯಪಾಲರ ಭೇಟಿಗೆ ಸಮಯ ಪಡೆದಿರುವುದು ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಆದರೆ, ಯಾವುದಕ್ಕಾಗಿ ರಾಜ್ಯಪಾಲರ ಭೇಟಿ ಎಂಬ ಗುಟ್ಟನ್ನು ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ.
ರಾಜೀನಾಮೆ ಸಲ್ಲಿಸಲು ರಾಜ್ಯಪಾಲರ ಬಳಿ ಸಮಯ ತೆಗೆದುಕೊಂಡಿದ್ದಾರಾ ಅಥವಾ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಳೆಗೆ ಎರಡು ವರ್ಷ ತುಂಬಲಿರುವ ಹಿನ್ನಲೆ ಭೇಟಿ ಆಗಲಿದ್ದಾರೆಯೇ ಎಂಬುದು ಸಸ್ಪೆನ್ಸ್ ಆಗಿಯೇ ಉಳಿದಿದೆ.
ಈ ಮಧ್ಯೆ ಗೋವಾದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಕರ್ನಾಟಕದಲ್ಲಿ ಯಾವುದೇ ಸಮಸ್ಯೆ, ರಾಜಕೀಯ ಅರಾಜಕತೆ ಸೃಷ್ಟಿಯಾಗಿಲ್ಲ. ಯಡಿಯೂರಲ್ಲ ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂದು ಶಹಬ್ಬಾಶ್ ಗಿರಿ ಕೊಟ್ಟಿರುವುದು ವಿಷಯ ಮತ್ತೊಂದು ತಿರುವು ಪಡೆದುಕೊಂಡಿದೆ.
ಇಂದು ಸಂಜೆ ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಷಾ, ಜೆಪಿ ನಡ್ಡಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಸಭೆ ನಡೆಸಿ ರಾಜ್ಯ ರಾಜಕೀಯ ಬೆಳವಣಿಗೆಗೆ ತೆರೆ ಎಳೆಯಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿತ್ತು. ಆದರೆ, ರಾತ್ರಿ 10 ಗಂಟೆಯಾದರೂ ದೆಹಲಿಯಲ್ಲಿ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಇದನ್ನೆಲ್ಲ ಗಮನಿಸಿದರೆ ಸದ್ಯದ ಮಟ್ಟಿಗೆ ಬಿಎಸ್ ವೈ ರಾಜೀನಾಮೆ ತೂಗುಗತ್ತಿಯಿಂದ ಪಾರಾದರಾ ಎಂಬ ಪ್ರಶ್ನೆಯೂ ಕಾಡುತ್ತಿದೆ. ಒಟ್ಟಾರೆ ಇಂದು ಫಿಕ್ಸ್ ಆಗಿದ್ದ ಸಿಎಂ ಬದಲಾವಣೆಯ ಕ್ಲೈಮಾಕ್ಸ್ ನಾಳೆಗೆ ಮುಂದೂಡಿಕೆಯಾಗಿದೆ. ಬಿಎಸ್ ವೈ ರಾಜೀನಾಮೆ ನೀಡ್ತಾರಾ ಇಲ್ಲ ಅಥವಾ ಇನ್ನು ಕೆಲ ದಿನಗಳ ಮಟ್ಟಿಗೆ ಸೇಫ್ ಆಗಲಿದ್ದಾರೆಯೇ ಎಂಬುದು ನಾಳೆ ಸ್ಪಷ್ಟವಾಗಲಿದೆ.