ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮವು ರಾಜ್ಯ ರಾಜಕಾರಣಕ್ಕೆ ಅನೇಕ ಪ್ರತಿಷ್ಠಿತ ನಾಯಕರನ್ನು ನೀಡಿದ ಊರಾಗಿ ಖ್ಯಾತಿ ಪಡೆದಿದೆ. ಇದೇ ಗ್ರಾಮದಿಂದ ಬಂದ ಮಾಜಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರ ವೈ.ಡಿ. ಅಣ್ಣಪ್ಪ, ತಮ್ಮ ಸರಳತೆ, ಸೇವಾಭಾವ ಮತ್ತು ಜನಪರ ನಿಲುವಿನಿಂದ ತಾಲೂಕಿನ ಜನಮನ ಗೆದ್ದಿದ್ದಾರೆ.
ಬಡತನದಲ್ಲಿ ಬೆಳೆದ ಅಣ್ಣಪ್ಪ ತಮ್ಮ ಬಾಲ್ಯದಲ್ಲಿ ತಂದೆಯೊಂದಿಗೆ ಹಬ್ಬ, ಜಾತ್ರೆಗಳಲ್ಲಿ ಖಾರ, ಮಂಡಕ್ಕಿ, ಬಾಳೆಹಣ್ಣು ಮಾರಾಟ ಮಾಡಿ ಕುಟುಂಬವನ್ನು ನಿಭಾಯಿಸುತ್ತಾ, ಸಹೋದರರ ಶಿಕ್ಷಣಕ್ಕೆ ಸಹಾಯ ಮಾಡಿದ್ದರು. ಕಷ್ಟದಲ್ಲೇ ಜೀವನದ ನೈಜ ಅರ್ಥವನ್ನು ಅರಿತು, ಶ್ರಮದಿಂದ ಉದ್ಯಮ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟ ಅವರು, ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದರು.
ಅಣ್ಣಪ್ಪನವರ ಜೀವನದಲ್ಲಿ ರಾಜಕೀಯ ಪ್ರವೇಶಕ್ಕೆ ಕಾರಣವಾದದ್ದು ಸಮಾಜ ಸೇವೆಯ ತುಡಿತವೇ ಆಗಿದೆ. ಬಡವರ ಸಂಕಷ್ಟ, ಅಲೆಮಾರಿ ಸಮುದಾಯಗಳ ಹೋರಾಟ ಎಲ್ಲವನ್ನೂ ಹತ್ತಿರದಿಂದ ಕಂಡು, “ಜನರ ಪರ ಬದಲಾವಣೆ ತರಬೇಕಾದರೆ ರಾಜಕೀಯವೇ ವೇದಿಕೆ” ಎಂಬ ನಂಬಿಕೆ ಪಡೆದ ಅವರು 2017ರಲ್ಲಿ ಜನರ ಒತ್ತಾಸೆಯ ಮೇರೆಗೆ ರಾಜಕೀಯಕ್ಕೆ ಕಾಲಿಟ್ಟರು.
ಗ್ರಾಮ ಪಂಚಾಯ್ತಿ ಸದಸ್ಯ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಳಿಕ ತಂದೆಯ ಸಂಸದೀಯ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿ, ವಿಜಯನಗರ ಜಿಲ್ಲೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದರು. ಅಲ್ಲದೇ ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿ, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಮ್ಮ ಖರ್ಚಿನಲ್ಲಿ ಸಹಾಯ ಹಸ್ತ ನೀಡುತ್ತಿದ್ದಾರೆ. ಪ್ರತಿ ವರ್ಷ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಯುವ ಪೀಳಿಗೆಗೆ ದಾರಿ ತೋರಿಸುತ್ತಿದ್ದಾರೆ.
ಬಿಜೆಪಿ ಪಕ್ಷದ ಸಕ್ರಿಯ ನಾಯಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಅಣ್ಣಪ್ಪ ಶ್ರಮಿಸುತ್ತಿದ್ದು, ದೇವಸ್ಥಾನ ಜೀರ್ಣೋದ್ದಾರ, ರಸ್ತೆ ಅಭಿವೃದ್ಧಿ, ಶಾಲೆಗಳಿಗೆ ಪೀಠೋಪಕರಣ ದೇಣಿಗೆ, ಬಡವರ ವಿವಾಹ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯರಾಗಿದ್ದಾರೆ.
ಅರಸೀಕೆರೆ ಹಾಗೂ ಸುತ್ತಮುತ್ತಲಿನ ಜನರ ವಿಶ್ವಾಸ ಗಳಿಸಿರುವ ಅಣ್ಣಪ್ಪ ತಮ್ಮ ಪ್ರಾಮಾಣಿಕತೆ, ಮಾನವೀಯತೆ, ಸಹಾನುಭೂತಿ ಮನೋಭಾವದಿಂದ ಜನನಾಯಕನಾಗಿ ಹೆಸರು ಮಾಡಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮುನ್ನಡೆಸುವ ನಾಯಕರಾಗುವ ನಿರೀಕ್ಷೆ ವ್ಯಕ್ತವಾಗಿದೆ.