ವಿಜಯಸಾಕ್ಷಿ ಸುದ್ದಿ, ಗದಗ
ಘನತ್ಯಾಜ್ಯ ವಿಲೇವಾರಿ ಘಟಕದ ಮಣ್ಣು ಸಾಗಾಟದ ಹಣ ಬಿಡುಗಡೆಗೆ ಲಂಚ ಕೇಳಿದ ಪ್ರಕರಣ ಸಂಬಂಧವಾಗಿ, ಅನಧಿಕೃತ ರಜೆ ಪಡೆದಿದ್ದ ಪೌರಾಯುಕ್ತ ರಮೇಶ ಜಾಧವ್ ಅವರಿಗೆ ಈಗ ಕಡ್ಡಾಯ ರ(ಸ)ಜೆಗೆ ಸೂಚಿಸಲಾಗಿದೆ.
ಮಣ್ಣು ಸಾಗಾಟದ ಹಣ ಬಿಡುಗಡೆ ಮಾಡಲು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಎಇಇ ವರ್ಧಮಾನ್ ಹುದ್ದಾರ್ ಅವರನ್ನು ಬಂಧಿಸಿದ್ದರು. ಪ್ರಕರಣ ಎರಡನೆ ಆರೋಪಿಯಾಗಿದ್ದ ನಗರಾಭಿವೃದ್ಧಿ ಕೋಶದ ಅಭಿಯಂತರರನ್ನು ಸಹ ಕಸ್ಟಡಿಗೆ ಪಡೆಯಲಾಗಿತ್ತು. ಇದೇ ಪ್ರಕರಣದ 3ನೇ ಆರೋಪಿಯಾಗಿದ್ದ ಪೌರಾಯುಕ್ತ ರಮೇಶ ಜಾಧವ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಅನಧಿಕೃತವಾಗಿ ಎರಡು ದಿನ ರಜೆ ಮೇಲೆ ತೆರಳಿದ್ದರು.
ಈ ವಿಷಯ ಅರಿತು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸುಂದರೇಶ ಬಾಬು ಅವರು, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ ವಟಗಲ್ ಅವರಿಗೆ ಜುಲೈ 20ರಂದು ಪೌರಾಯುಕ್ತರ ಪ್ರಭಾರ ವಹಿಸಿ ಆದೇಶ ಹೊರಡಿಸಿದ್ದರು.
ಇದಾದ ಎರಡು ದಿನದ ನಂತರ ನಿರೀಕ್ಷಣಾ ಜಾಮೀನಿನೊಂದಿಗೆ ದಿಢೀರ್ ಪ್ರತ್ಯಕ್ಷರಾದ ಪೌರಾಯುಕ್ತ ರಮೇಶ ಜಾಧವ್, ಎಂದಿನಂತೆ ಆಯುಕ್ತರ ಕಚೇರಿ ಪ್ರವೇಶಿಸಿದ್ದಾರೆ. ತಮ್ಮ ಹುದ್ದೆಯನ್ನು ಪ್ರಭಾರ ವಹಿಸಿದ ಮಾಹಿತಿ ತಿಳಿದು, ಜಿಲ್ಲಾಧಿಕಾರಿಗಳ ಭೇಟಿ ಮಾಡಿದ್ದಾರೆ. ಸಭ್ಯ ಮತ್ತು ಪ್ರಾಮಾಣಿಕ ಜಿಲ್ಲಾಧಿಕಾರಿ ಸುಂದರೇಶ ಬಾಬು ಅವರು, ಅತ್ಯಂತ ನಯವಾಗಿ ಕಡ್ಡಾಯ ರ(ಸ)ಜೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
ಅತ್ಯಂತ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಆಗಮಿಸಿದ್ದ ಜಾಧವ್ ಅವರಿಗೆ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸಾಗಿದ್ದಾರೆ. ಈ ಹಿಂದೆ ತಮ್ಮನ್ನು ಗದಗ ಜಿಲ್ಲೆಗೆ ಕರೆತಂದ ಆಡಳಿತ ಪಕ್ಷದ ರಾಜಕಾರಣಿಯೊಬ್ಬರಿಗೆ ವಿಷಯ ತಿಳಿಸಿ, ಹೇಗಾದರೂ ಮಾಡಿ ಪೌರಾಯುಕ್ತ ಕುರ್ಚಿ ಕೊಡಿಸಿ ಎಂದು ವಿನಂತಿಸಿಕೊಂಡಿದ್ದಾರೆ. ಆ ಪ್ರಭಾವಿ ರಾಜಕಾರಣಿಯೂ ತೆರೆ ಮರೆಯಲ್ಲಿ ರಮೇಶ್ ಜಾಧವ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿದೆ. ಒಟ್ಟಾರೆ ಇನ್ನೊಂದು ವಾರದಲ್ಲಿ ನಗರಸಭೆ ಇನ್ನಷ್ಟು ಬೆಳವಣಿಗೆಗಳಿಗೆ ಸಾಕ್ಷಿಯಾಗುವುದು ನಿಶ್ಚಿತ.